ADVERTISEMENT

ಹೆಲ್ಮೆಟ್‌ ಹಾಕಿಕೊಂಡರಷ್ಟೆ ಬೈಕ್‌ ಚಾಲನೆ: GNS ಶಾಲೆ ವಿದ್ಯಾರ್ಥಿಗಳ ಆವಿಷ್ಕಾರ

ಬಾಲಶೇಖರ ಬಂದಿ
Published 16 ಫೆಬ್ರುವರಿ 2025, 4:31 IST
Last Updated 16 ಫೆಬ್ರುವರಿ 2025, 4:31 IST
ಮೂಡಲಗಿ ತಾಲ್ಲೂಕಿನ ಯಾದವಾಡದ ಜಿಎನ್‌ಎಸ್‌ ಶಾಲೆಯ ವಿದ್ಯಾರ್ಥಿಗಳಾದ ನಬಿಹಸನ್‌ ಸಯ್ಯದ ಹಾಗೂ ಗುರುಲಿಂಗಯ್ಯ ಹಿರೇಮಠ ತಯರಿಸಿದ ಹೈಟೆಕ್‌ ಹೆಲ್ಮೆಟ್‌ ಮಾದರಿಗೆ ಪ್ರಶಸ್ತಿ ನೀಡಲಾಯಿತು. ವಿದ್ಯಾರ್ಥಿಗಳೊಂದಿಗೆ ಮಾರ್ಗದರ್ಶನ ನೀಡಿರುವ ಶಿಕ್ಷಕ ಎಸ್.ಎಸ್. ಬಳೂರಗಿ ಇದ್ದರು
ಮೂಡಲಗಿ ತಾಲ್ಲೂಕಿನ ಯಾದವಾಡದ ಜಿಎನ್‌ಎಸ್‌ ಶಾಲೆಯ ವಿದ್ಯಾರ್ಥಿಗಳಾದ ನಬಿಹಸನ್‌ ಸಯ್ಯದ ಹಾಗೂ ಗುರುಲಿಂಗಯ್ಯ ಹಿರೇಮಠ ತಯರಿಸಿದ ಹೈಟೆಕ್‌ ಹೆಲ್ಮೆಟ್‌ ಮಾದರಿಗೆ ಪ್ರಶಸ್ತಿ ನೀಡಲಾಯಿತು. ವಿದ್ಯಾರ್ಥಿಗಳೊಂದಿಗೆ ಮಾರ್ಗದರ್ಶನ ನೀಡಿರುವ ಶಿಕ್ಷಕ ಎಸ್.ಎಸ್. ಬಳೂರಗಿ ಇದ್ದರು   

ಮೂಡಲಗಿ: ‘ಹೆಲ್ಮೆಟ್‌ ಹಾಕಿಕೊಳ್ಳದಿದ್ದರೆ ಬೈಕ್‌ ಚಾಲನೆಯಾಗುವುದಿಲ್ಲ. ನೀವು ಎಷ್ಟೇ ಕಿಕ್‌ ಹಾಕಿದರೂ ಬೈಕ್‌ ಚಾಲನೆಗೆ ಸ್ಪಂದಿಸುವುದಿಲ್ಲ. ತಲೆಗೆ ಹೆಲ್ಮೆಟ್‌ ಹಾಕಿಕೊಂಡು ಕಿಕ್‌ ಹಾಕಿದರೆ ಸಾಕು ಬೈಕ್‌ ತಕ್ಷಣ ಚಾಲನೆಗೊಳ್ಳುತ್ತದೆ’ ಎಂಬ ಮಾದರಿಯನ್ನು ವಿದ್ಯಾರ್ಥಿಗಳು ತಯಾರಿಸಿದ್ದಾರೆ.

ಇಂತದೊಂದು ‘ಹೈಟೆಕ್‌ ಹೆಲ್ಮೆಟ್‌’ ಆವಿಷ್ಕಾರವನ್ನು ಮೂಡಲಗಿ ತಾಲ್ಲೂಕಿನ ಯಾದವಾಡದ ಜಿಎನ್‌ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ನಬಿಹಸನ್‌ ಸಯ್ಯದ ಹಾಗೂ ಗುರುಲಿಂಗಯ್ಯ ಹಿರೇಮಠ ವಿಜ್ಞಾನದ ಮಾದರಿ ಮಾಡಿ ರಾಜ್ಯ ಮಟ್ಟದಲ್ಲಿ ಗಮನಸೆಳೆದಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಬಿಬಿಎಂಪಿ ಪ್ರೌಢಶಾಲೆಯ ಆತಿಥ್ಯದಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗ, ಸಿಜೆಐ ಫೌಂಡೇಷನ್‌ ಸ್ಟೆಮ್‌ಪಾರ್ಕ್ ಆಯೋಜಿಸಿದ್ದ ‘ಇನೋವೇಷನ್‌ ಫೆಸ್ಟ್‌–25’ರಲ್ಲಿ ವಿನೂತನ ಮಾದರಿಯ ಹೆಲ್ಮೆಟ್‌ ಪ್ರದರ್ಶಿಸಿ ಯಾದವಾಡ ಶಾಲೆಯ ಬಾಲಕರು ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.

ADVERTISEMENT

‘ಹೆಲ್ಮೆಟ್‌ಗೆ ಸೆನ್ಸಾರ್‌ ಮತ್ತು ಬ್ಯಾಟರಿ ಅಳವಡಿಸಿ ಸಿದ್ದಗೊಳಿಸಿದ್ದು, ಸ್ಪರ್ಧೆಯಲ್ಲಿ ಆಟಿಕೆ ಬೈಕ್‌ ಬಳಸಿ ಅದರ ಪ್ರಾತ್ಯಕ್ಷತೆ ತೋರಿಸಿದ್ದೆವು. ನಿರ್ಣಾಯಕರು ಬಾಳ ಖುಷಿಯಾಗಿ ನಮ್ಮ ಕೈಕುಲಕಿ ಸ್ಥಳದಲ್ಲಿಯೇ ಅಭಿನಂದಿಸಿದ್ದರು ಎಂದು ಬಾಲ ವಿಜ್ಞಾನಿಗಳಾದ ನಬಿಹಸನ್‌ ಮತ್ತು ಗುರುಲಿಂಗಯ್ಯ ಹಿರೇಮಠ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಹೆಲ್ಮೆಟ್‌ನ್ನು ಬೈಕ್‌ ಸವಾರರಿಗೆ ಕಡ್ಡಾಯ ಮಾಡಿದ್ದರೂ ಸಹ ಧರಿಸದೆ ಬೈಕ್‌ ಚಲಾಯಿಸಿ ಆಕಸ್ಮಿಕವಾಗಿ ಆಗುವ ಅಪಘಾತದಲ್ಲಿ ತಮ್ಮ ಪ್ರಾಣ ಕಳೆದುಕೊಳ್ಳುವುದಲ್ಲದೆ ಕುಟುಂಬಕ್ಕೂ ದೊಡ್ಡ ದು:ಖ ತರುತ್ತಾರೆ. ಇದನ್ನು ತಪ್ಪಿಸುವ ಸಲುವಾಗಿ ಹೈಟೆಕ್ ಹೆಲ್ಮೆಟ್‌ ಮಾದರಿಯನ್ನು ಮಕ್ಕಳು ಮಾಡಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುವ ಶಾಲೆಯ ಗಣಿತ ಶಿಕ್ಷಕ ಎಸ್‌.ಎಸ್. ಬಳೂರಗಿ ತಿಳಿಸಿದರು. 

25 ವರ್ಷಗಳಿಂದ ಶಿಕ್ಷಕ ಎಸ್‌.ಎಸ್.ಬಳೂರಗಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಗಣಿತ ಮಾದರಿ ಮಾಡುವಲ್ಲಿ ಹೆಸರು ಮಾಡಿದ್ದಾರೆ. ನಮ್ಮ ಶಾಲೆಗೆ ಹೆಮ್ಮೆ ತಂದಿದ್ದಾರೆ
ಶಿವಪ್ಪಗೌಡ ನ್ಯಾಮಗೌಡರ ಸಂಸ್ಥೆಯ ಅಧ್ಯಕ್ಷ
ಯಾದವಾಡ ಜಿಎನ್‌ಎಸ್‌ ಪ್ರೌಢಶಾಲೆಯು ಪ್ರತಿ ವರ್ಷ ವಿಜ್ಞಾನ ಮಾದರಿಗಳನ್ನು ಮಾಡುವಲ್ಲಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಗಮನಸೆಳೆಯುತ್ತಲಿದೆ. ಇದು ಮೂಡಲಗಿ ವಲಯಕ್ಕೆ ಹೆಮ್ಮೆಯ ಸಂಗತಿ
ಅಜಿತ್ ಮನ್ನಿಕೇರಿ ಬಿಇಒ ಮೂಡಲಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.