ಸಂಕೇಶ್ವರ: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದಿನೇದಿನೇ ಹೆಚ್ಚುತ್ತಿರುವ ಘನ ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ‘ಶೂನ್ಯ ತ್ಯಾಜ್ಯ’ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಎಂದು ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ ಹೇಳಿದರು.
ಸಂಕೇಶ್ವರ ಸಮೀಪದ ಎಸ್ಜೆಪಿಎನ್ ಟ್ರಸ್ಟ್ನ ಘನ ತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿ ಘಟಕದಲ್ಲಿ ಶುಕ್ರವಾರ ಜರುಗಿದ ಜಿಲ್ಲಾಡಳಿತ, ಎಸ್ಜೆಪಿಎನ್ ಟ್ರಸ್ಟ್, ಪಾಲಿಟೆಕ್ನಿಕ್ ಮತ್ತು ಹರ್ಮೀಷಿಯಾ ಪ್ರೈ.ಲಿ. ಆಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗಾಗಿ ಆಯೋಜಿಸಲಾಗಿದ್ದ ‘ಶೂನ್ಯ ತ್ಯಾಜ್ಯ ನಿರ್ವಹಣೆ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಶೂನ್ಯ ತ್ಯಾಜ್ಯ ನಿರ್ವಹಣೆ’ ಕುರಿತು ನಿಡಸೋಸಿ ಮಠದ ನಿಜಲಿಂಗೇಶ್ವರ ಶ್ರೀ ಪರಿಚಯಿಸಿರುವ ವಿನೂತನ ಕ್ರಮಗಳು ತ್ಯಾಜ್ಯ ನಿರ್ವಹಣೆಯಲ್ಲಿ ಭರವಸೆ ಮೂಡಿಸಿದ್ದು, ಆಡಳಿತ ಯಂತ್ರದಲ್ಲಿ ಜಾಗೃತಿ ಮತ್ತು ಬದ್ಧತೆ ಮೂಡಿದರೆ, ಇಂತಹ ಪರಿಸರಪರ ಉಪಕ್ರಮಗಳು ಇನ್ನಷ್ಟು ಯಶಸ್ವಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.
ಎಸ್ಜೆಪಿಎನ್ ಪಾಲಿಟೆಕ್ನಿಕ್ ಪ್ರಾಂಶುಪಾಲ ಬಿ.ಆರ್. ಉಮ್ರಾನೆ ಮಾತನಾಡಿ, ಘನ ತ್ಯಾಜ್ಯಗಳ ಸಂಗ್ರಹ, ಸಂಸ್ಕರಣೆ ಹಾಗೂ ವಿಲೇವಾರಿಯನ್ನು ಸಂಘಟಿತವಾಗಿ ನಿರ್ವಹಿಸುವ ಅಗತ್ಯವಿದೆ. ನಗರ ಪ್ರದೇಶಗಳಲ್ಲಿ ತ್ಯಾಜ್ಯವನ್ನು ನಿಯಂತ್ರಣವಿಲ್ಲದೆ ಸಂಗ್ರಹಿಸಿ ಸುಡುವುದರಿಂದ ತೀವ್ರ ವಾಯುಮಾಲಿನ್ಯ ಉಂಟಾಗುತ್ತಿದ್ದು, ಇದರ ದುಷ್ಪರಿಣಾಮಗಳು ಮಾನವ ಆರೋಗ್ಯ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂದು ಎಚ್ಚರಿಸಿದರು.
ಕಾರ್ಯಾಗಾರದಲ್ಲಿ ಹರ್ಮಿ ಕಾಂಪೋಸ್ಟ್ ಘಟಕದ ಕಾರ್ಯವಿಧಾನ, ಗೊಬ್ಬರ ಉತ್ಪಾದನೆ, ಘನ ಹಾಗೂ ಗೃಹ ತ್ಯಾಜ್ಯ ನಿರ್ವಹಣೆಯ ಪ್ರಾತ್ಯಕ್ಷಿಕೆ, ತ್ಯಾಜ್ಯ ಮರುಬಳಕೆ ಮತ್ತು ಮರುಸಂಸ್ಕರಣೆಯ ತಾಂತ್ರಿಕ ಅಂಶಗಳ ಕುರಿತು ವಿವರವಾದ ಮಾಹಿತಿ ನೀಡಲಾಯಿತು. ಸಂವಾದ ಹಾಗೂ ಪ್ರಶ್ನೋತ್ತರ ಅವಧಿಯಲ್ಲಿ ಶೂನ್ಯ ತ್ಯಾಜ್ಯ ನಿರ್ವಹಣೆಯ ನವೀನ ವಿಧಾನಗಳ ಬಗ್ಗೆ ನಿಜಲಿಂಗೇಶ್ವರ ಸ್ವಾಮೀಜಿ ಪ್ರಶಿಕ್ಷಣಾರ್ಥಿಗಳಿಗೆ ಪ್ರಾಯೋಗಿಕ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಡಿಯುಡಿಸಿ ಕಾರ್ಯನಿರ್ವಾಹಕ ಇಂಜಿನಿಯರ್ ವಿಠ್ಠಲ ತಡಸಲೂರ, ಸಂಕೇಶ್ವರ ಸ್ವಾಮಿ ವಿವೇಕಾನಂದ ಆಸ್ಪತ್ರೆಯ ವೈದ್ಯ ರಮೇಶ್ ದೊಡಭಂಗಿ, ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪರಿಸರ ಇಂಜಿನಿಯರ್ಗಳು ಹಾಗೂ ಸಂಬಂಧಿತ ಅಧಿಕಾರಿಗಳು ಭಾಗವಹಿಸಿದ್ದರು.
ಹರ್ಮೀಷಿಯಾ ಸಂಸ್ಥೆಯ ನಿರ್ದೇಶಕ ಶ್ರೀಧರ ಪಾಟೀಲ ಕಾರ್ಯಕ್ರಮಕ್ಕೆ ಸ್ವಾಗತಿಸಿ ಮಾತನಾಡಿದರು. ಎಸ್.ಆರ್. ಬಡಿಗೇರ ವಂದಿಸಿದರು. ಕಾವ್ಯ ಮಳಗೆ ಕಾರ್ಯಕ್ರಮವನ್ನು ನಿರೂಪಿಸಿದರು.
ಸ್ವಚ್ಛತೆ ಎಂಬುದು ಕೇವಲ ಕಸವನ್ನು ಸಂಗ್ರಹಿಸಿ ಸಾಗಿಸುವ ಮಟ್ಟಕ್ಕೆ ಸೀಮಿತವಾಗಬಾರದು. ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿಗಣಿಸಿ, ಅದರಿಂದ ಗೊಬ್ಬರ ಹಾಗೂ ಮರುಬಳಕೆಯ ವಸ್ತುಗಳನ್ನು ಉತ್ಪಾದಿಸುವ ಮೂಲಕ ಆರ್ಥಿಕ ಮೌಲ್ಯ ಸೃಷ್ಟಿಸುವ ಚಿಂತನೆ ಬೆಳೆಸಬೇಕು. ಈ ದಿಕ್ಕಿನಲ್ಲಿ ಹರ್ಮೀಷಿಯಾ ಸಂಸ್ಥೆಯ ತ್ಯಾಜ್ಯ ಸಂಸ್ಕರಣೆ ಘಟಕ ಹಾಗೂ ತಮ್ಮ ನೇತೃತ್ವದಲ್ಲಿ ಮಂಗಳೂರಿನಲ್ಲಿ ರಾಮಕೃಷ್ಣ ಮಿಷನ್ ಮೂಲಕ ಆರಂಭಗೊಂಡ ‘ಸ್ವಚ್ಛ ಮಂಗಳೂರು’ ಜನಾಂದೋಲನದ ತ್ಯಾಜ್ಯ ನಿರ್ವಹಣಾ ಪ್ರಯೋಗಗಳು ಪರಿಣಾಮಕಾರಿ ಮಾದರಿಗಳಾಗಿವೆ.
ನಿಜಲಿಂಗೇಶ್ವರ ಸ್ವಾಮೀಜಿ - ಉತ್ತರಾಧಿಕಾರಿ, ಸಿದ್ಧಸಂಸ್ಥಾನ ಮಠ, ನಿಡಸೋಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.