ಬೆಳಗಾವಿ: ತಾಲ್ಲೂಕಿನ ಬಸ್ತವಾಡ ಮತ್ತು ತಾರಿಹಾಳ ಗ್ರಾಮ ಪಂಚಾಯ್ತಿಯ ವಿವಿಧ ವಸತಿ ಯೋಜನೆಯಡಿ ನಡೆಯುತ್ತಿರುವ ಮನೆಗಳ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾ ಪಂಚಾಯ್ತಿ ಸಿಇಒ ಆರ್. ರಾಮಚಂದ್ರನ್ ಬುಧವಾರ ಪರಿಶೀಲಿಸಿದರು.
‘ವಸತಿರಹಿತ ಮತ್ತು ನಿವೇಶನ ರಹಿತರ ಸಮೀಕ್ಷೆ ನಡೆಸಲಾಗಿದ್ದು, ಜಿಲ್ಲೆಯಲ್ಲಿ 1,42,856 ಫಲಾನುಭವಿಗಳನ್ನು ಗುರುತಿಸಲಾಗಿದೆ. ಯಾರಾದರೂ ಅರ್ಹ ಫಲಾನುಭವಿಗಳು ಇದ್ದಲ್ಲಿ ಸಾರ್ವಜನಿಕರು ಮಾಹಿತಿ ನೀಡಬಹುದು. ಅವರನ್ನು ಗುರುತಿಸಿ ಆನ್ಲೈನ್ನಲ್ಲಿ ನಮೂದಿಸಬೇಕು. ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯ್ತಿ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳ ಮನವೊಲಿಸಿ ಪ್ರಗತಿಯಲ್ಲಿರುವ ಎಲ್ಲ ಮನೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು’ ಎಂದು ತಿಳಿಸಿದರು.
‘ಮನೆ ನಿರ್ಮಾಣದಲ್ಲಿ ಫಲಾನುಭವಿಗಳ ಆರ್ಥಿಕ ನೆರವಿಗಾಗಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಮತ್ತು ವಸತಿ ಯೋಜನೆ ಒಗ್ಗೂಡಿಸುವಿಕೆಯಲ್ಲಿ ಒಟ್ಟು 90 ಮಾನವ ದಿನಗಳನ್ನು 4 ಹಂತಗಳಲ್ಲಿ ನೀಡುತ್ತಿದ್ದು, ಒಟ್ಟು ₹22400 ನೀಡಬೇಕು’ ಎಂದು ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.