ಬೆಂಗಳೂರು: `ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರ ಮೇಲಿದೆ. ಅಂಥ ಶಿಕ್ಷಕರು ಅತ್ಯಾಚಾರ ಎಸಗುವುದು ವಿಷಾದಕರ. ಅಂಥವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ' ಎಂದು ಮೌಖಿಕವಾಗಿ ಹೇಳಿರುವ ಹೈಕೋರ್ಟ್, ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ನಂದೀಶ ಎಂಬುವರಿಗೆ ಜಾಮೀನು ನಿರಾಕರಿಸಿದೆ.
ನಂದೀಶ ಅವರು ಕೆ.ಆರ್.ಪೇಟೆಯಲ್ಲಿ ಖಾಸಗಿ ಟ್ಯುಟೋರಿಯಲ್ ನಡೆಸುತ್ತಿದ್ದಾರೆ. ಅಲ್ಲಿಗೆ ಅನನ್ಯಾ (ಹೆಸರು ಬದಲಾಯಿಸಲಾಗಿದೆ) ಎಂಬ ಹೆಣ್ಣುಮಗಳೊಬ್ಬಳು ಬರುತ್ತಿದ್ದರು. ತನ್ನನ್ನು ಪ್ರೀತಿಸು ಎಂದು ನಂದೀಶ, ಅವರನ್ನು ಒತ್ತಾಯಿಸುತ್ತಿದ್ದರು. ಆದರೆ ಅನನ್ಯಾ ಆ ಕೋರಿಕೆಯನ್ನು ತಿರಸ್ಕರಿಸುತ್ತ ಬಂದರು.
ಒಂದು ದಿನ ಟ್ಯುಟೋರಿಯಲ್ನಲ್ಲಿ ಯಾರೂ ಇಲ್ಲದಿದ್ದಾಗ, ಅನನ್ಯಾ ಅವರ ಮೇಲೆ ಅತ್ಯಾಚಾರ ಎಸಗಲು ನಂದೀಶ ಯತ್ನಿಸಿದರು. ಇದಕ್ಕೆ ಅನನ್ಯಾ ಪ್ರತಿರೋಧ ವ್ಯಕ್ತಪಡಿಸಿದರು. ಆಗ ಅಲ್ಲಿಯೇ ಇದ್ದ ಅರಿಶಿಣದ ಕೊಂಬನ್ನು ಅನನ್ಯಾ ಕೊರಳಿಗೆ ಕಟ್ಟಿ, `ಈಗ ನಾವಿಬ್ಬರೂ ಮದುವೆ ಆದಂತಾಯಿತು. ನನ್ನನ್ನು ಒಪ್ಪಿಕೋ' ಎಂದು ಒತ್ತಾಯಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದರು.
ಈ ಪ್ರಕರಣದ ನಂತರ, ಅನನ್ಯಾ ಮೈಸೂರಿಗೆ ಹೋದರು. ಅಲ್ಲಿಗೂ ಬಂದ ನಂದೀಶ, ಅವರ ಮೇಲೆ ಮತ್ತೆ ಅತ್ಯಾಚಾರ ಎಸಗಿದ್ದರು. ಈ ಸಂಬಂಧ ದೂರು ದಾಖಲಾಗಿ, ನಂದೀಶ ಅವರನ್ನು ಬಂಧಿಸಲಾಗಿದೆ. ಜಾಮೀನು ಕೋರಿ ನಂದೀಶ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಎನ್. ಆನಂದ ಇದರ ವಿಚಾರಣೆ ನಡೆಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.