ಬೆಂಗಳೂರು: ವಿಂಡ್ಸರ್ ಮ್ಯಾನರ್ ಸೇತುವೆಯಿಂದ ಬೀಳಲು ಮುಂದಾಗಿದ್ದ ಎಂಬಿಎ ವಿದ್ಯಾರ್ಥಿ ಅಜಯ್ (28) ಎಂಬಾತನನ್ನು ಹೈಗ್ರೌಂಡ್ಸ್ ಠಾಣೆಯ ಪೊಲೀಸರು ರಕ್ಷಿಸಿದ್ದಾರೆ.
‘ಬಿಹಾರದ ಆತ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು, ಸದ್ಯ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೈ ಹಾಗೂ ಎದೆ ಭಾಗದಲ್ಲಿ ಕೊಯ್ದ ಗಾಯದ ಗುರುತುಗಳಿದ್ದು, ಆತ ಬ್ಲೂವೇಲ್ ಆಟ ಆಡುತ್ತಿರಬಹುದು ಎಂಬ ಅನುಮಾನವಿದೆ. ಆದರೆ, ಆತನ ಬಳಿ ಸದ್ಯಕ್ಕೆ ಮೊಬೈಲ್ ಸಿಕ್ಕಿಲ್ಲ’ ಎಂದು ಪೊಲೀಸರು ಹೇಳಿದರು.
‘ಮೈಸೂರಿನ ಕಾಲೇಜೊಂದರಲ್ಲಿ ಎಂಬಿಎ ಓದುತ್ತಿರುವ ಆತ, ಅಲ್ಲಿಯೇ ಹಾಸ್ಟೆಲೊಂದರಲ್ಲಿ ಉಳಿದುಕೊಂಡಿದ್ದಾನೆ. ಮೂರು ದಿನಗಳ ಹಿಂದೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಅಲ್ಲಿಂದ ನಾಪತ್ತೆಯಾಗಿದ್ದ ಆತ, ಭಾನುವಾರ ನಗರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ.’
‘ಮಧ್ಯಾಹ್ನ ವಿಂಡ್ಸರ್ ಮ್ಯಾನರ್ ಸೇತುವೆಯಲ್ಲಿ ನಿಂತಿದ್ದ ಆತ, ಕೆಳಗೆ ಹಾರುವುದಾಗಿ ಕೂಗುತ್ತಿದ್ದ. ಆತನನ್ನು ನೋಡಿದ್ದ ಸ್ಥಳೀಯರು, ಮನವೊಲಿಸಿ ಕೆಳಗಿಳಿಸಲು ಯತ್ನಿಸಿದರು. ಆತ ಮಾತು ಕೇಳದಿದ್ದಾಗ ಠಾಣೆಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಆತನನ್ನು ಸೇತುವೆಯಿಂದ ಇಳಿಸಿದರು’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.