ADVERTISEMENT

ಕನ್ನಡ ಸಾಂಸ್ಕೃತಿಕ ಪರಂಪರೆಯ ಪ್ರಚಾರ ಅಗತ್ಯ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST

ಬೆಂಗಳೂರು: ರಾಜ್ಯದ ಸಾಂಸ್ಕೃತಿಕ ಕಲೆಯನ್ನು ರಾಷ್ಟ್ರ ಮಟ್ಟದಲ್ಲಿ ಬೆಳಕಿಗೆ ತರುವಂತಹ ಕಾರ್ಯಕ್ರಮಗಳನ್ನು ಎಲ್ಲರೂ ಒಟ್ಟಾಗಿ ಸೇರಿ ಮಾಡಬೇಕಾಗಿದೆ ಎಂದು  ಕಲಾವಿದ ಹಾಗೂ ಪ್ರತಿರೂಪಿ ಸಂಸ್ಥೆಯ ಮುಖ್ಯಸ್ಥ ಶಶಿಧರ್ ಅಡಪ  ಅಭಿಪ್ರಾಯಪಟ್ಟರು.

ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೆಡ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ವಾರ್ತಾ ಇಲಾಖೆ ತಯಾರಿಸಿದ ಭೂತಾರಾಧನೆ ವಿಷಯಾಧಾರಿತ ಸ್ತಬ್ಧಚಿತ್ರಕ್ಕೆ ತೃತೀಯ ಬಹುಮಾನ ಲಭಿಸಿದ ಸಂತೋಷವನ್ನು ಹಂಚಿಕೊಳ್ಳಲು ಹಾಗೂ ಇದಕ್ಕಾಗಿ ಶ್ರಮಿಸಿದ ಕಲಾವಿದರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ವಾರ್ತಾ ಇಲಾಖೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಕೇರಳ ರಾಜ್ಯದವರು ತಮ್ಮ ಕಲೆಯನ್ನು ಚೆನ್ನಾಗಿ ಪ್ರಚಾರ ಮಾಡುವುದರಿಂದ ಅವರ ಕಲೆಗಳು ರಾಷ್ಟ್ರ ವ್ಯಾಪ್ತಿಯಲ್ಲಿ ಗುರುತಿಸಿಕೊಳ್ಳುತ್ತದೆ. ನಮ್ಮ ರಾಜ್ಯವೂ ಭವ್ಯ ಪರಂಪರೆಯನ್ನು ಹೊಂದಿದ್ದರೂ, ಪ್ರಚಾರದ ಕೊರತೆಯಿದೆ ಎಂದರು.

ವಾರ್ತಾ ಇಲಾಖೆಯ ನಿರ್ದೇಶಕ ಬೇವಿನಮರದ ಮಾತನಾಡಿ, `ಒಟ್ಟುಗೂಡಿ ಕೆಲಸ ಮಾಡುವುದರಿಂದ ಸಾಧನೆ ಮಾಡಲು ಸಾಧ್ಯ. ಸ್ತಬ್ಧಚಿತ್ರದ ಯಶಸ್ಸಿಗೆ ಸಂಜಯ್ ಮಾರ್ಕೆಟಿಂಗ್ ಸಂಸ್ಥೆ, ಯಕ್ಷಿ  ಕಮ್ಯುನಿಕೇಷನ್ ಹಾಗೂ ಅದರಲ್ಲಿ ಭಾಗವಹಿಸಿದ ಬ್ರೈಟ್-ವೇ ಕಾಲೇಜಿನ ವಿದ್ಯಾರ್ಥಿಗಳ ತುಂಬು ಸಹಕಾರ, ಶ್ರಮ ಕಾರಣ~ ಎಂದರು.

ಇಲಾಖೆಯ ಹಿಂದಿನ ನಿರ್ದೇಶಕ, ಹಾಲಿ ಕೆಪಿಟಿಸಿಎಲ್‌ನ ಪ್ರಧಾನ ವ್ಯವಸ್ಥಾಪಕ ಮುದ್ದುಮೋಹನ್ ಮಾತನಾಡಿದರು. ಇಲಾಖೆಯ ಉಪಕಾರ್ಯದರ್ಶಿ ಸುಧಾಕರಶೆಟ್ಟಿ, ಜಂಟಿ ನಿರ್ದೇಶಕರಾದ ಎಂ.ರವಿಕುಮಾರ್, ಎನ್.ಭೃಂಗೀಶ್, ಡಾ.ಬಿ.ಆರ್.ಮಮತಾ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಭೂತವೇಷಧಾರಿಗಳಾಗಿ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಬ್ರೈಟ್-ವೇ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.