ADVERTISEMENT

ಕಳವು ಪ್ರಕರಣದಲ್ಲಿ ಒಡಿಶಾ ಪ್ರೇಮಿಗಳ ಸೆರೆ: ಚಿನ್ನ ಜಫ್ತಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 19:51 IST
Last Updated 4 ಅಕ್ಟೋಬರ್ 2017, 19:51 IST

ಬೆಂಗಳೂರು: ಕೆಲಸ ಮಾಡುತ್ತಿದ್ದ ಫ್ಲ್ಯಾಟ್‌ನಲ್ಲೇ ಹಣ, ಒಡವೆ ದೋಚಿದ್ದ ಪ್ರೇಮಿಗಳು ಹಾಗೂ ಅವರ ಇಬ್ಬರು ಸಹಚರರು ಕಾಡುಗೋಡಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

‘ಒಡಿಶಾದ ಗಜಪತಿ ಜಿಲ್ಲೆಯ ಸಬೋತಿ ಲೀಮಾ (22), ಆಕೆಯ ಪ್ರಿಯಕರ ಶಿವ ಲೀಮಾ (27), ಮಿಥುನ್ (22) ಹಾಗೂ ಸುಜಿತ್ (25) ಎಂಬುವರನ್ನು ಬಂಧಿಸಿ, ₹ 6 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದೇವೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

'ಸಬೋತಿ ಹಾಗೂ ಆಕೆಯ ಸ್ನೇಹಿತರು 2011 ರಿಂದ 2017ರ ಅವಧಿಯಲ್ಲಿ ನಮ್ಮ ಫ್ಲ್ಯಾಟ್‌ನಲ್ಲಿ ₹ 20 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಐಟಿಪಿಎಲ್ ರಸ್ತೆಯ ‘ಪ್ರೆಸ್ಟೀಜ್ ಶಾಂತಿನಿಕೇತನ’ ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿ ಧರ್ಮವೀರ್ ಸಿಂಗ್ ಎಂಬುವರು ಸೆ.20ರಂದು ಕಾಡುಗೋಡಿ ಠಾಣೆಗೆ ದೂರು ಕೊಟ್ಟಿದ್ದರು.

ADVERTISEMENT

ಒಡಿಶಾದಿಂದ 2011ರಲ್ಲಿ ನಗರಕ್ಕೆ ಬಂದಿದ್ದ ಆರೋಪಿಗಳು, ದಿಣ್ಣೂರು ಮುಖ್ಯರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸಬೋತಿ ಹಾಗೂ ಶಿವ ಅದೇ ವರ್ಷ ಧರ್ಮವೀರ್ ಸಿಂಗ್ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಫಿರ್ಯಾದಿಯ ಕುಟುಂಬ ಮುಂಬೈನಲ್ಲಿರುವ ಸಂಬಂಧಿಕರ ಮನೆಗೆ ಆಗಾಗ್ಗೆ ಹೋಗಿ ಬರುತ್ತಿತ್ತು. ಈ ಅವಧಿಯಲ್ಲಿ ಪ್ರೇಮಿಗಳು ಹಂತ ಹಂತವಾಗಿ ಹಣ ಹಾಗೂ ಒಡವೆ ಕಳವು ಮಾಡಿ, ಸಹಚರರಿಗೆ ಕೊಡುತ್ತಿದ್ದರು. ಅವರು ಅದನ್ನು ಮಾರಾಟ ಮಾಡಿ ಹಣ ತರುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

2 ಕೆ.ಜಿ.ಯಷ್ಟು ಆಭರಣಗಳನ್ನು ಮನೆಯಲ್ಲಿಟ್ಟಿದ್ದ ಧರ್ಮಸಿಂಗ್ ಕುಟುಂಬಕ್ಕೆ ಗ್ರಾಂಗಳ ಲೆಕ್ಕದಲ್ಲಿ ಚಿನ್ನ ಕಳವಾಗುತ್ತಿರುವುದು ಗಮನಕ್ಕೆ ಬಂದಿರಲಿಲ್ಲ. ಆದರೆ, ಇತ್ತೀಚೆಗೆ ವಿದೇಶಿ ನೋಟುಗಳು ಕಳವಾಗಿದ್ದವು. ಈ ಬಗ್ಗೆ ಕೆಲಸದವರನ್ನು ವಿಚಾರಣೆ ನಡೆಸಿದ್ದಾಗ ತಪ್ಪೊಪ್ಪಿಕೊಂಡಿದ್ದ ಅವರು, ನೋಟುಗಳನ್ನು ಮರಳಿಸಿದ್ದರು. ಆ ನಂತರ ಅನುಮಾನಗೊಂಡ ಕುಟುಂಬ ಸದಸ್ಯರು, ಒಡವೆಗಳನ್ನು ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿತ್ತು. ಬಳಿಕ ಅವರು ಠಾಣೆಯ ಮೆಟ್ಟಿಲೇರಿದ್ದರು.

‘ಧರ್ಮಸಿಂಗ್ ದೂರು ಕೊಟ್ಟಿರುವ ವಿಚಾರ ಆರೋಪಿಗಳಿಗೆ ಗೊತ್ತಿರಲಿಲ್ಲ. ಏಕಾಏಕಿ ಅವರ ಮನೆ ಮೇಲೆ ದಾಳಿ ನಡೆಸಿದಾಗ, ದೂರುದಾರರ ಕುಟುಂಬಕ್ಕೆ ಸೇರಿದ ಕೆಲ ಒಡವೆಗಳು ಮನೆಯಲ್ಲಿ ಪತ್ತೆಯಾದವು. ಬಳಿಕ ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.