ಬೆಂಗಳೂರು: ‘ನನ್ನ ಹಾಗೂ ಕುಟುಂಬದ ಸದಸ್ಯರಿಗೆ ಬೆದರಿಕೆ ಒಡ್ಡುವ ದೂರವಾಣಿ ಕರೆ ಮತ್ತು ಪತ್ರಗಳು ಬರುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಇಂತಹ ಪ್ರಯತ್ನಗಳನ್ನು ಖಂಡಿಸುತ್ತೇನೆ’ ಎಂದು ಕಾಂಗ್ರೆಸ್ ಮುಖಂಡ ಪ್ರೊ.ಬಿ.ಕೆ. ಚಂದ್ರಶೇಖರ್ ತಿಳಿಸಿದ್ದಾರೆ.
‘ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ, ಮಾಧ್ಯಮಗಳ ಸಂದರ್ಶನಗಳಲ್ಲಿ ದೇಶ ಮತ್ತು ರಾಜ್ಯದ ರಾಜಕಾರಣ ಕುರಿತು ಮಾತನಾಡುವಾಗ ಬಿಜೆಪಿಯ ಹಿಂದುತ್ವ, ವಿವಿಧ ಧರ್ಮಗಳ ಧ್ರುವೀಕರಣದ ಬಗ್ಗೆ ಮಾತನಾಡುತ್ತಾ ಬಂದಿದ್ದೇನೆ. ಯಾವತ್ತೂ ಕೆಟ್ಟ ಭಾಷೆಯಲ್ಲಿ ಮಾತನಾಡುವ ಅಭ್ಯಾಸ ನನಗಿಲ್ಲ. ದೂರವಾಣಿ ಕರೆ ಮಾಡುವ ಕೆಲವರು, ನಿಮ್ಮ ಕುಟುಂಬದ ಸದಸ್ಯರು ಒಬ್ಬರೇ ಓಡಾಡುತ್ತಾರೆ, ನೋಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಪ್ರಧಾನಿ ಮೋದಿ, ಅಮಿತ್ ಶಾ, ಅನಂತಕುಮಾರ ಹೆಗಡೆ, ಯೋಗಿ ಆದಿತ್ಯನಾಥ, ಮನೋಹರ ಲಾಲ್ ಖಟ್ಟರ್ ಇವರೆಲ್ಲರನ್ನೂ ವಿಮರ್ಶೆಗೆ ಒಳಪಡಿಸಿ ಟೀಕೆ, ಟಿಪ್ಪಣಿ ಮಾಡುತ್ತಲೇ ಬಂದಿದ್ದೇನೆ. ಹೀಗೆ ಮಾಡುವಾಗ ಅವರೆಲ್ಲರನ್ನೂ ಅತ್ಯಂತ ಗೌರವದಿಂದ ಪ್ರಸ್ತಾಪಿಸುವುದು ನನ್ನ ಪರಿಪಾಠ. ಹೀಗಿದ್ದರೂ ಕಳೆದ 10-12 ದಿನಗಳಲ್ಲಿ 3-4 ಪತ್ರ ಮತ್ತು ಹಲವು ಕರೆಗಳು ಬಂದಿವೆ. ಈ ಕುರಿತು ದೂರು ದಾಖಲಿಸುತ್ತೇನೆ’ ಎಂದೂ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.