ADVERTISEMENT

ಕಾಂಗ್ರೆಸ್ ಸಭೆ: ಮಲ್ಲೇಶ್ವರದಲ್ಲಿ ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 19:39 IST
Last Updated 13 ಏಪ್ರಿಲ್ 2013, 19:39 IST

ಬೆಂಗಳೂರು: ಕಾಂಗ್ರೆಸ್ ಚುನಾವಣಾ ಪ್ರಚಾರದ ಉದ್ಘಾಟನಾ ಕಾರ್ಯಕ್ರಮದಿಂದಾಗಿ ಶನಿವಾರ ಮಲ್ಲೇಶ್ವರ ಸುತ್ತಮುತ್ತ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.

ಸಮಾರಂಭದ ಉದ್ಘಾಟನೆ ಬೆಳಿಗ್ಗೆ 11ಕ್ಕೆ ನಿಗದಿಯಾಗಿತ್ತು. ಆದರೆ, ಪಕ್ಷದ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರು ಬೆಳಿಗ್ಗೆ 9ರಿಂದಲೇ ಮಲ್ಲೇಶ್ವರ ಆಟದ ಮೈದಾನಕ್ಕೆ ಬರತೊಡಗಿದರು. ಮಧ್ಯಾಹ್ನ 12ರವರೆಗೂ ನಾಯಕರು ಬರುತ್ತಲೇ ಇದ್ದರು. ಕೇಂದ್ರ ಸಚಿವರು, ಎಐಸಿಸಿ ಪದಾಧಿಕಾರಿಗಳು ಮತ್ತು ರಾಜ್ಯ ಕಾಂಗ್ರೆಸ್‌ನ ಪ್ರಮುಖ ನಾಯಕರ ವಾಹನಗಳು ಬಂದಾಗ ಪೊಲೀಸರು ಇತರೆ ವಾಹನಗಳನ್ನು ತಡೆದು ನಿಲ್ಲಿಸುತ್ತಿದ್ದರು. ಇದರಿಂದಾಗಿ ಸುತ್ತಮುತ್ತಲ ಕೆಲ ರಸ್ತೆಗಳಲ್ಲಿ ದಿಢೀರ್ ವಾಹನದಟ್ಟಣೆ ಉಂಟಾಗುತ್ತಿತ್ತು.

ಅರ್ಧದಲ್ಲೇ ಖಾಲಿ: ಮಲ್ಲೇಶ್ವರ ಆಟದ ಮೈದಾನದ ಮುಕ್ಕಾಲು ಭಾಗಕ್ಕೆ ಶಾಮಿಯಾನ ಹಾಕಲಾಗಿತ್ತು. ಸಾಕಷ್ಟು ಸಂಖ್ಯೆಯ ಕುರ್ಚಿಗಳನ್ನೂ ಹಾಕಲಾಗಿತ್ತು. ಆರಂಭದಲ್ಲಿ ಹೆಚ್ಚು ಸಂಖ್ಯೆಯ ಜನರು ಸೇರಿದ್ದರು. ಬಿಸಿಲ ಝಳ ಏರುತ್ತಾ ಹೋದಂತೆಲ್ಲಾ ಜನರೂ ಅಲ್ಲಿಂದ ಖಾಲಿ . ಸಮಾರಂಭ ಮುಗಿವ ಹೊತ್ತಿಗೆ ಬಹುಪಾಲು ಕುರ್ಚಿಗಳು ಖಾಲಿ ಇದ್ದವು.

ಕಾಂಗ್ರೆಸ್ ಸೇರ್ಪಡೆ:  ಪಾಲಿಕೆಯ ಮಾಜಿ ಸದಸ್ಯರಾದ ಕೋಕಿಲಾ ಚಂದ್ರಶೇಖರ್, ಕೇಶವಮೂರ್ತಿ, ಕೆ.ಎಸ್.ಸತ್ಯನಾರಾಯಣ ಈ ಸಮಾರಂಭದಲ್ಲಿ ಕಾಂಗ್ರೆಸ್ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.