ಬೆಂಗಳೂರು: ‘ಕಾನೂನುಗಳ ಸರಳೀಕರಣದ ಹೆಸರಿನಲ್ಲಿ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಕಸಿಯಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ’ ಎಂದು ರಾಷ್ಟ್ರೀಯ ಕಾನೂನು ಕಾಲೇಜಿನ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಬಾಬು ಮಾಥ್ಯೂ ಆರೋಪಿಸಿದರು.
ಭಾರತೀಯ ವಕೀಲರ ಸಂಘ ಮತ್ತು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಕಾರ್ಮಿಕ ಕಾನೂನುಗಳ ತಿದ್ದುಪಡಿ ಮತ್ತು ಉದ್ಭವಿಸುತ್ತಿರುವ ಸವಾಲುಗಳು’ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
‘44 ಕಾರ್ಮಿಕ ಕಾನೂನುಗಳನ್ನು ಕ್ರೊಡೀಕರಿಸಿ ನಾಲ್ಕು ಕಾರ್ಮಿಕ
ಸಂಹಿತೆಗಳನ್ನು ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕಾರ್ಮಿಕರ ಪ್ರತಿಭಟನೆ ಹಕ್ಕು, ಸಾಮೂಹಿಕವಾಗಿ ಚೌಕಾಸಿ ಮಾಡುವ ಹಕ್ಕು, ನ್ಯಾಯಾ
ಲಯದ ಮೊರೆ ಹೋಗುವ ಹಕ್ಕುಗಳನ್ನು ಇದು ಕಸಿದುಕೊಳ್ಳಲಿದೆ. ಕಾರ್ಮಿಕ ವಿರೋಧಿಯಾಗಿರುವ ಈ ಕ್ರಮ ಬಲು ಅಪಾಯಕಾರಿ’ ಎಂದು ವಿಶ್ಲೇಷಿಸಿದರು.
‘ಬಂಡವಾಳಶಾಹಿಗಳ ಪರವಾಗಿ ರುವ ಕೇಂದ್ರ ಸರ್ಕಾರ, ಅವರಿಗೆ ಕಡಿಮೆ ಸಂಬಳ ಪಡೆಯುವ ಕಾರ್ಮಿಕರನ್ನು ಒದಗಿಸಲು ಮುಂದಾಗಿದೆ. ಈ ಕುತಂತ್ರದ ವಿರುದ್ಧ ಪ್ರತಿಭಟನೆ ನಡೆಸಬೇಕು’ ಎಂದರು.
ವಕೀಲ ವಿಲಾಸ್ ರಂಗನಾಥ್ ದಾತಾರ್, ‘ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕಾಲಮಿತಿಯ ಉದ್ಯೋಗ ಜಾರಿಗೊಳಿಸುವ ವಿಷಯವನ್ನು ಪ್ರಸ್ತಾಪಿಸಲಾಗಿದೆ.
ಈ ಯೋಜನೆ ಜಾರಿಯಾದರೆ ಸಂಘಟಿತ ವಲಯದ ಕಾರ್ಮಿಕರಿಗೆ ಉದ್ಯೋಗ ಹಾಗೂ ಸಾಮಾಜಿಕ ಭದ್ರತೆ ಸಿಗದು. ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿರುವ ಕೇಂದ್ರ ಈಗಿರುವ ಉದ್ಯೋಗಗಳನ್ನೂ ನಾಶ ಮಾಡಲು ಮುಂದಾಗಿದೆ’ ಎಂದು ಆರೋಪಿಸಿದರು.
‘ಇಂದಿನ ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆಗಳು ಬಂಡವಾಳಶಾಹಿ ಪರ ಹಾಗೂ ಕಾರ್ಮಿಕರ ವಿರೋಧಿಯಾಗಿವೆ. ಕಾರ್ಮಿಕ ಕಾನೂನುಗಳ ಬದಲಾವಣೆ ಹಾಗೂ ಮಾರುಕಟ್ಟೆಯ ಪೈಪೋಟಿಗೆ ಮೊದಲು ಬಲಿಯಾ ಗುವುದು ರೈತರು ಹಾಗೂ ಕಾರ್ಮಿಕರು’ ಎಂದು ಭಾರತೀಯ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮುರಳೀಧರ ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.