ಬೆಂಗಳೂರು: `ಪ್ರತಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ವರ್ಷದ ಕ್ರಿಯಾ ಯೋಜನೆಯಲ್ಲಿ ಜೈವಿಕ ಇಂಧನ ಬಳಕೆಯನ್ನು ಸೇರಿಸಬೇಕು~ ಎಂದು ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಕಾರ್ಯಕಾರಿ ಅಧ್ಯಕ್ಷ ವೈ.ಬಿ.ರಾಮಕೃಷ್ಣ ತಿಳಿಸಿದರು.
ಭಾನುವಾರ ಚಿತ್ರಕಲಾ ಪರಿಷತ್ತಿನಲ್ಲಿ ನಡೆದ ಜೈವಿಕ ಇಂಧನ ಮೇಳದ ಸಮಾರೋಪ ಸಮಾರಂಭ ನಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಅಕ್ಟೋಬರ್ 2 ರಿಂದ ಪ್ರತಿ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಗ್ರಾಮ ಸಭೆಗಳನ್ನು ನಡೆಸಲಾಗುವುದು.
ಇಂತಹ ಗ್ರಾಮ ಸಭೆಗಳಲ್ಲಿ ಜೈವಿಕ ಇಂಧನದ ಬಳಕೆಯ ಬಗ್ಗೆ ಚರ್ಚೆ ನಡೆಸಿ, ಜಾಗೃತಿಯನ್ನು ಮೂಡಿಸಲಾಗುವುದು~ ಎಂದರು. `ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ರೈತರನ್ನು ಸಂಘಟಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು. ಮುಖ್ಯವಾಗಿ ಜೈವಿಕ ಇಂಧನವನ್ನು ಅವರೇ ಉತ್ಪಾದಿಸಿ ಅವರೇ ಬಳಕೆ ಮಾಡುವಂತೆ ಪ್ರೋತ್ಸಾಹಿಸಲಾಗುವುದು~ ಎಂದು ಹೇಳಿದರು.
`ಈ ಮೇಳವು ಜೈವಿಕ ಇಂಧನದ ಬಳಕೆಯ ಮುಂದಿನ ಕಾರ್ಯಕ್ರಮಗಳ ವ್ಯವಸ್ಥಿತ ರೂಪವನ್ನು ನೀಡಲು ಚಾಲನೆ ನೀಡಲಾಗಿದೆ. ಇದು ಆರಂಭ ಮಾತ್ರವಾಗಿದೆ. ಮುಂದೆ ಸಾಧಿಸುವುದು ಬಹಳ ಇದೆ~ ಎಂದು ಪ್ರತಿಕ್ರಿಯಿಸಿದರು.
`ಮೇಳದಲ್ಲಿ ಒಟ್ಟು 12 ಮಳಿಗೆಗಳು ಭಾಗವಹಿಸಿದ್ದವು. ಜನರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದರಿಂದ ಸ್ಫೂರ್ತಿ ಪಡೆದು ಮುಂದಿನ ಕಾರ್ಯಕ್ರಮಗಳನ್ನು ಯೋಜಿಸಲಾಗುವುದು~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.