ADVERTISEMENT

`ಜಾತಿ ವ್ಯವಸ್ಥೆ ಕಬಂಧಬಾಹು ಬೇರೂರಿದೆ'

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2012, 19:59 IST
Last Updated 23 ಡಿಸೆಂಬರ್ 2012, 19:59 IST

ಬೆಂಗಳೂರು: `ನಗರೀಕರಣ, ಜಾಗತೀಕರಣ, ಉದಾರೀಕರಣಗಳ ಪ್ರಭಾವದಿಂದಾಗಿ ಜಾತಿ ವ್ಯವಸ್ಥೆ ನಾಶವಾಗುತ್ತಿದೆ ಎಂಬ ಭಾವನೆ ಜನರಲ್ಲಿ ಇದೆ. ಇದು ಮೇಲ್ನೋಟಕ್ಕೆ ಕಾಣುವ ವಾಸ್ತವ. ಆದರೆ, ಜಾತಿ ವ್ಯವಸ್ಥೆಯ ಕಬಂಧಬಾಹು ಇನ್ನೂ ಆಳವಾಗಿ ಬೇರೂರಿದೆ ಎಂಬ ಅಂಶದ ಬಗ್ಗೆ ದೇವರ ಹುಚ್ಚು ಕಾದಂಬರಿಯಲ್ಲಿ ಬೆಳಕು ಚೆಲ್ಲಲಾಗಿದೆ' ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು. 

`ಅಂಕಿತ ಪುಸ್ತಕ' ಪ್ರಕಾಶನದ ಆಶ್ರಯದಲ್ಲಿ ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪತ್ರಕರ್ತ ಜೋಗಿ (ಗಿರೀಶ್ ರಾವ್) ಅವರ `ದೇವರ ಹುಚ್ಚು (ಕಾದಂಬರಿ)', `ಮಹಾನಗರ (ಗ್ರಹಿಕೆಗಳು)', `ರಾಯಭಾಗದ ರಹಸ್ಯ ರಾತ್ರಿ (ಕತೆಗಳು-ಎರಡನೇ ಮುದ್ರಣ)' ಪುಸ್ತಕಗಳ ಬಿಡುಗಡೆ ಮಾಡಿ ಅವರು ಮಾತನಾಡಿದರು.
`ನಿತ್ಯ ಪೂಜೆ ಮಾಡುವವನಿಗೆ ದೇವರ ಮೇಲಿನ ನಂಬಿಕೆ ಕಡಿಮೆಯಾಗುತ್ತಾ ಹೋಗುತ್ತದೆ ಹಾಗೂ ಈ ಕೆಲಸ ಹೊಟ್ಟೆಪಾಡು ಎಂಬ ಭಾವನೆ ಆತನಲ್ಲಿ ಬರುತ್ತದೆ. ಅದರ ಪ್ರತಿಫಲನವೇ ಈ ಕಾದಂಬರಿಯಲ್ಲಿ ಹೊರಹೊಮ್ಮಿರುವ ರಂಗನಾಥನ ಪಾತ್ರ' ಎಂದು ಅವರು ತಿಳಿಸಿದರು. 

`ಈಚಿನ ದಿನಗಳಲ್ಲಿ ಲೇಖಕರಿಗೆ ಜಾಗತೀಕರಣ ಹಾಗೂ ಅಮೆರಿಕವನ್ನು ತೆಗಳುವುದು ಫ್ಯಾಷನ್ ಆಗಿದೆ. ಅಮೆರಿಕದಲ್ಲಿ ಮಧ್ಯಮ ವರ್ಗದ ಸ್ಥಿತಿ ಚೆನ್ನಾಗಿದೆ. ಸುನಾಮಿ ಬಂದರೆ ಎಲ್ಲರೂ ಧನಸಹಾಯ ಮಾಡುತ್ತಾರೆ ಹಾಗೂ ಆ ಹಣ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತದೆ. ಯುವತಿಯರು ಮಧ್ಯರಾತ್ರಿಯಲ್ಲೂ ನಿರಾತಂಕವಾಗಿ ತಿರುಗಾಡುವ ಸ್ಥಿತಿ ಇದೆ' ಎಂದು ಅವರು ತಿಳಿಸಿದರು.`3500 ವರ್ಷಗಳ ಇತಿಹಾಸ ಇರುವ ನಮ್ಮ ದೇಶಕ್ಕೆ ಈಗ ಉತ್ತಮ ನಾಯಕರು ಇಲ್ಲ. ಇಲ್ಲಿನ ರಾಜಕೀಯ ವ್ಯವಸ್ಥೆ ಭ್ರಷ್ಟವಾಗಿದೆ ಹಾಗೂ ಸಾಂಸ್ಕೃತಿಕ ವ್ಯವಸ್ಥೆ ಛಿದ್ರವಾಗಿದೆ' ಎಂದು ಅವರು ಬೇಸರ ವ್ಯಕ್ತಪಡಿಸಿದರು. 

ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್ ಮಾತನಾಡಿ, `ಆಧುನಿಕ ಕಾಲಘಟ್ಟದಲ್ಲಿ ನಗರದಲ್ಲಿ ಅಸುರಕ್ಷತೆಯ ಭಾವನೆ ಹೆಚ್ಚುತ್ತಿದೆ.
ನೈಜವಲ್ಲದ ಬದುಕು ನಿಜವಾದ ಬದುಕನ್ನು ನಾಶಪಡಿಸುತ್ತಿದೆ. ಚಿನ್ನದ ಕಿರೀಟ ಮತ್ತಿತರ ಉಡುಗೋರೆಗಳನ್ನು ದೇವರಿಗೆ ಅರ್ಪಿಸುವ ಮೂಲಕ ತಪ್ಪನ್ನು ಸರಿಪಡಿಸಿಕೊಳ್ಳುವವರು ಇದ್ದಾರೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.