ADVERTISEMENT

ಪ್ರತ್ಯೇಕ ಪ್ರಕರಣ: ಇಬ್ಬರು ನೇಣಿಗೆ ಶರಣು

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 19:51 IST
Last Updated 9 ಜುಲೈ 2013, 19:51 IST

ಬೆಂಗಳೂರು: ಗೋವಿಂದರಾಜನಗರದಲ್ಲಿ ಸೋಮವಾರ ಸನಾ (20) ಎಂಬ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದು, ದೊಮ್ಮಲೂರಿನಲ್ಲಿ ಕಿರಣ್ (44) ಎಂಬ ಕೂಲಿ ಕಾರ್ಮಿಕ ನೇಣು ಹಾಕಿಕೊಂಡಿದ್ದಾನೆ.

ಬಿ.ಎ ಪದವೀಧರೆಯಾದ ಸನಾ ಅವರು ಪತಿ ಜಮೀಲ್ ಅಹಮ್ಮದ್ ಜತೆ ಗೋವಿಂದರಾಜನಗರ ಎರಡನೇ ಅಡ್ಡರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೂಲತಃ ವಿಜಾಪುರ ಜಿಲ್ಲೆಯ ಸನಾ ಮತ್ತು ಜಮೀಲ್ ಅವರು ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜಮೀಲ್, ಜೆ.ಪಿ.ನಗರದ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಎಂಜಿನಿಯರ್ ಆಗಿದ್ದಾರೆ. ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಸನಾ ಅವರು ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ.

`ಅಳಿಯ ಜಮೀಲ್, ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ದಂಪತಿ ಅನ್ಯೋನ್ಯವಾಗಿದ್ದರು. ರಂಜಾನ್ ಹಿನ್ನೆಲೆಯಲ್ಲಿ ಪತಿ ತನ್ನನ್ನು ಬೇಗನೆ ತವರು ಮನೆಗೆ ಕಳುಹಿಸಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ' ಎಂದು ಸನಾ ಅವರ ತಂದೆ ಅಬ್ದುಲ್ ರಜಾಕ್ ಅವರು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಮತ್ತೊಂದು ಪ್ರಕರಣ: ಇಂದಿರಾನಗರ ಸಮೀಪದ ಲಕ್ಷ್ಮಿ ಬಡಾವಣೆ ನಿವಾಸಿಯಾದ ಕಿರಣ್, ಕೂಲಿ ಕಾರ್ಮಿಕರಾಗಿದ್ದರು. ಅವರು ರಾತ್ರಿ ದೊಮ್ಮಲೂರಿನ ಬಿಡಿಎ ವಾಣಿಜ್ಯ ಸಮುಚ್ಚಯಕ್ಕೆ ಬಂದು ಕಟ್ಟಡದ ಒಳ ಭಾಗದಲ್ಲಿ ನೇಣು ಹಾಕಿಕೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.