
ಬೆಂಗಳೂರು: ಪ್ರೀತಿಸಲು ನಿರಾಕರಿಸಿದ ಕಾರಣಕ್ಕೆ ಧನರಾಜ್ (40) ಎಂಬಾತ ಸುನಿತಾ (27) ಎಂಬುವರಿಗೆ ಹಾಡಹಗಲೆ ಚಾಕುವಿನಿಂದ 12 ಬಾರಿ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರು ಟರ್ಫ್ ಕ್ಲಬ್ ಎದುರು ಗುರುವಾರ ನಡೆದಿದೆ.
ತಾವರೆಕೆರೆ ನಿವಾಸಿ ಸುನಿತಾ ಮೂರು ವರ್ಷದಿಂದ ಟರ್ಫ್ ಕ್ಲಬ್ನ ಟಿಕೆಟ್ ಕೌಂಟರ್ನಲ್ಲಿ ಕೆಲಸ ಮಾಡುತ್ತಿದ್ದರು. ಆವಲಹಳ್ಳಿ ನಿವಾಸಿ ಧನರಾಜ್ ಕಾರು ಚಾಲಕನಾಗಿದ್ದಾನೆ.
ಗುರುವಾರ ಎರಡನೇ ಪಾಳಿಯಲ್ಲಿದ್ದ ಸುನಿತಾ, ಬಸ್ ಇಳಿದು ಮಧ್ಯಾಹ್ನ 1.45ಕ್ಕೆ ಟರ್ಫ್ ಕ್ಲಬ್ನ ಮೂರನೇ ದ್ವಾರದ ಬಳಿ ಬರುತ್ತಿದ್ದಾಗ ಹಿಂದಿನಿಂದ ಬಂದಿರುವ ಆರೋಪಿ, ಸುನಿತಾ ಅವರ ಹೊಟ್ಟೆ, ಎದೆ ಮತ್ತು ಕುತ್ತಿಗೆಯ ಭಾಗಕ್ಕೆ ಇರಿದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಯನ್ನು ಹಿಡಿದು ಥಳಿಸಿ, ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಗಾಯಗೊಂಡಿದ್ದ ಸುನಿತಾ ಅವರನ್ನು ಕೂಡಲೇ ಸಮೀಪದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ರಕ್ತಸ್ರಾವವಾಗಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು.
ಸುನಿತಾ ಅವರಿಗೆ ಎಂಟು ವರ್ಷಗಳ ಹಿಂದೆ ಮದುವೆಯಾಗಿತ್ತು. ಅವರಿಗೆ ಏಳು ವರ್ಷದ ಮಗಳಿದ್ದಾಳೆ.
ಧನರಾಜ್ಗೆ ಒಂಬತ್ತು ವರ್ಷದ ಹಿಂದೆ ಮದುವೆಯಾಗಿದ್ದು ಎರಡು ಮಕ್ಕಳಿದ್ದಾರೆ. ಧನರಾಜ್ ಎರಡು ವರ್ಷದಿಂದ ಸುನಿತಾ ಅವರ ಕುಟುಂಬಕ್ಕೆ ಪರಿಚಯವಿದ್ದ. ಮೂರು ತಿಂಗಳ ಹಿಂದಿನಿಂದ ಆತ ಸುನಿತಾ ಅವರಿಗೆ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಆದರೆ, ಇದಕ್ಕೆ ಒಪ್ಪದ ಅವರು ಧನರಾಜ್ ಜತೆಗೆ ಮಾತು ಬಿಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆ ನಂತರ ಬಹಳಷ್ಟು ಬಾರಿ ಸುನಿತಾ ಅವರನ್ನು ಭೇಟಿಯಾಗಿದ್ದ ಧನರಾಜ್, ಪ್ರೀತಿಸುವಂತೆ ಒತ್ತಾಯ ಮಾಡುತ್ತಿದ್ದ. ಆದರೆ, ಸುನಿತಾ ಆತನಿಗೆ ಬೈಯ್ದು ಕಳಿಸಿದ್ದರು. ಈ ಕಾರಣಕ್ಕೆ ಕೋಪಗೊಂಡು ಈ ಕೃತ್ಯ ಎಸಗಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.