ADVERTISEMENT

'ಬಸ್‌ ಬಳಸಿ, ಬೆಂಗಳೂರು ಉಳಿಸಿ'

ಮಲ್ಲೇಶ್ವರದ ಸಂಪಿಗೆ ರಸ್ತೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 19:30 IST
Last Updated 4 ಅಕ್ಟೋಬರ್ 2017, 19:30 IST
ನಗರದಲ್ಲಿ ಬುಧವಾರ ನಡೆದ ಬಿಎಂಟಿಸಿ ಬಸ್‌ ದಿನಾಚರಣೆಯಲ್ಲಿ ಸಂಸ್ಥೆ ಅಧ್ಯಕ್ಷ ನಾಗರಾಜ ಯಾದವ್‌ ಸಾರ್ವಜನಿಕರಿಗೆ ಕರಪತ್ರ ವಿತರಿಸಿದರು
ನಗರದಲ್ಲಿ ಬುಧವಾರ ನಡೆದ ಬಿಎಂಟಿಸಿ ಬಸ್‌ ದಿನಾಚರಣೆಯಲ್ಲಿ ಸಂಸ್ಥೆ ಅಧ್ಯಕ್ಷ ನಾಗರಾಜ ಯಾದವ್‌ ಸಾರ್ವಜನಿಕರಿಗೆ ಕರಪತ್ರ ವಿತರಿಸಿದರು   

ಬೆಂಗಳೂರು: ವಾಹನ ದಟ್ಟಣೆ ಮತ್ತು ಪರಿಸರ ನಾಶ ತಡೆಗಟ್ಟಲು ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ‘ಬಿಎಂಟಿಸಿ ಬಸ್‌ ಬಳಸಿ, ಬೆಂಗಳೂರು ಉಳಿಸಿ’ ಘೋಷ ವಾಕ್ಯದೊಂದಿಗೆ ನಗರದಲ್ಲಿ ಬುಧವಾರ ಬಿಎಂಟಿಸಿ ಸಂಸ್ಥೆಯು 93ನೇ ಬಸ್‌ ದಿನ ಆಚರಿಸಿತು.

ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಮೆಟ್ರೊ ರೈಲು ನಿಲ್ದಾಣದ ಮುಂಭಾಗ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಕರ ಪತ್ರ ಹಂಚಿದ ಬಿಎಂಟಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿ, ‘ವೈಯಕ್ತಿಕ ವಾಹನಗಳ ಬಳಕೆ ಕಡಿಮೆ ಮಾಡಿ, ಬಿಎಂಟಿಸಿ ಬಸ್‌ ಪ್ರಯಾಣ ಮಾಡಿ’ ಎಂದು ಮನವಿ ಮಾಡಿದರು.

ಬಿಎಂಟಿಸಿ ಅಧ್ಯಕ್ಷ ನಾಗರಾಜ ಯಾದವ್‌ ಮಾತನಾಡಿ, ‘ವೈಯಕ್ತಿಕ ಸಾರಿಗೆಯಿಂದ ಸಾರ್ವಜನಿಕ ಸಾರಿಗೆಯತ್ತ ಪ್ರಯಾಣಿಕರನ್ನು ಆಕರ್ಷಿಸಲು ಸಂಸ್ಥೆಯು ಪ್ರತಿ ತಿಂಗಳ 4ನೇ ದಿನವನ್ನು ಬಸ್ ದಿನವಾಗಿ ಆಚರಿಸುತ್ತಿದೆ. ಬಸ್ ದಿನಾಚರಣೆ 7 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಏಳು ವರ್ಷಗಳಲ್ಲಿ ಇಂಧನ ಉಳಿತಾಯ, ಪರಿಸರ ಮಾಲಿನ್ಯ ನಿಯಂತ್ರಣ ಹಾಗೂ ಸಂಚಾರ ದಟ್ಟಣೆ ತಗ್ಗಿಸಲು ಬಸ್ ದಿನಾಚರಣೆಯಿಂದ ಸಾಕಷ್ಟು ಸಹಕಾರಿಯಾಗಿದೆ’ ಎಂದು ತಿಳಿಸಿದರು.

ADVERTISEMENT

‘ಸಂಸ್ಥೆಯು ನಗರದ 52 ಲಕ್ಷ ಜನರಿಗೆ ಸುರಕ್ಷಿತ ಪ್ರಯಾಣ ಸೌಲಭ್ಯ ಒದಗಿಸುತ್ತಿದೆ. ನಾಗರಿಕರು ದ್ವಿಚಕ್ರ ವಾಹನ, ಕಾರು ಬಳಕೆ ಕೈಬಿಟ್ಟು, ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸಿದರೆ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಹಾಗೂ ಅಪಘಾತ ತಡೆಗಟ್ಟಬಹುದು. ಸಂಚಾರ ದಟ್ಟಣೆಯನ್ನೂ ತಗ್ಗಿಸಬಹುದು’ ಎಂದು ತಿಳಿಸಿದರು.

ಬಸ್‌ ದಿನಾಚರಣೆ ಪ್ರಯುಕ್ತ ಸಮೂಹ ಸಾರಿಗೆ ಪ್ರೋತ್ಸಾಹಿಸಲು ಯಶವಂತಪುರ– ದಾಬಸ್‌ಪೇಟೆ ಕೈಗಾರಿಕಾ ಪ್ರದೇಶಕ್ಕೆ ಹೊಸದಾಗಿ ‘258 ಡಿ.ಎನ್’ ಬಸ್‌ ಸಂಚಾರ ಆರಂಭಿಸಲಾಯಿತು. ಈ ಬಸ್‌ ನೆಲಮಂಗಲ, ಟಿ.ಬೇಗೂರು, ಕುಲುವನಹಳ್ಳಿ, ಬಿಲ್ಲಿನಕೋಟೆ ಮಾರ್ಗವಾಗಿ ಸಂಚರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.