ADVERTISEMENT

ಮೆಟ್ರೊ ಮೇಲ್ಸೇತುವೆ ಕಂಬಗಳ ಬುಡಕ್ಕೆ ಕಸ

ಬಿ–ಪ್ಯಾಕ್‌ನಿಂದ ಉಪ ಲೋಕಾಯುಕ್ತರಿಗೆ ದೂರು ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 14 ಮೇ 2015, 19:36 IST
Last Updated 14 ಮೇ 2015, 19:36 IST

ಬೆಂಗಳೂರು: ‘ನಮ್ಮ ಮೆಟ್ರೊ’ ರೈಲು ಮೇಲ್ಸೇತುವೆಯ ಕಂಬಗಳ ಬುಡದಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ ಎಂದು ದೂರಿ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ–ಪ್ಯಾಕ್) ಉಪ ಲೋಕಾಯುಕ್ತರಿಗೆ ಗುರುವಾರ ದೂರು ಸಲ್ಲಿಸಿದೆ.

‘ನಮ್ಮ ಮೆಟ್ರೊದ ಹಸಿರು ಮತ್ತು ನೇರಳೆ ಮಾರ್ಗಗಳಲ್ಲಿ ನಾವು ಬೆಳಿಗ್ಗೆ 6ರಿಂದ ಸಂಜೆ 5 ಗಂಟೆವರೆಗೆ ಪರಿಶೀಲನೆ ನಡೆಸಿದ್ದೇವೆ. ಮೇಲ್ಸೇತುವೆ ಕಂಬಗಳ ಬುಡದಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ’ ಎಂದು ಬಿ–ಪ್ಯಾಕ್‌ನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ (ಸಿಇಒ) ರೇವತಿ ಅಶೋಕ್ ಹೇಳಿದರು. ದೂರಿನ ಜೊತೆಗೆ 700 ಛಾಯಾಚಿತ್ರಗಳನ್ನೂ ಪೂರಕವಾಗಿ ಸಲ್ಲಿಸಲಾಗಿದೆ.

ಕಂಬಗಳ ಬುಡದಲ್ಲಿ ಸುರಿದಿರುವ ತ್ಯಾಜ್ಯಗಳು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೂ ಅಡಚಣೆ ಉಂಟು ಮಾಡು ತ್ತಿವೆ. ನಾಯಂಡಹಳ್ಳಿ, ದೀಪಾಂಜಲಿ ನಗರ, ಮಾಗಡಿ ರಸ್ತೆ, ಇಂದಿರಾ ನಗರ ಮತ್ತು ಬೈಯಪ್ಪನಹಳ್ಳಿಯಲ್ಲಿ ಇದರ ಸಮಸ್ಯೆ ಹೆಚ್ಚಿದೆ. ಹಾಗೆಯೇ, ಜರಗ ನಹಳ್ಳಿ, ಕನಕಪುರ ರಸ್ತೆ, ನ್ಯಾಷನಲ್ ಕಾಲೇಜು, ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ಕೂಡ ಈ ಸಮಸ್ಯೆ ತೀವ್ರವಾಗಿದೆ ಎಂದು ದೂರಲಾಗಿದೆ.

‘ಈ ವಿಚಾರದ ಬಗ್ಗೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ ಸಿಎಲ್‌) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಮಾಹಿತಿ ನೀಡಿದ್ದರೂ ಅವರು ಕ್ರಮ ಕೈಗೊಂಡಿಲ್ಲ ಎಂಬ ದೂರು ಇದೆ’ ಎಂದು ಉಪ ಲೋಕಾಯುಕ್ತ ನ್ಯಾಯ ಮೂರ್ತಿ ಸುಭಾಷ್ ಬಿ. ಅಡಿ ಹೇಳಿದರು.

ಈ ದೂರಿಗೆ ಸಂಬಂಧಿಸಿದಂತೆ ಬಿಬಿ ಎಂಪಿ ಆಯುಕ್ತರು ಮತ್ತು ಬಿಎಂ ಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು ಮೇ 18ರಂದು ಉಪ ಲೋಕಾಯುಕ್ತರ ಕಚೇರಿಗೆ ಖುದ್ದಾಗಿ ಹಾಜರಾಗಬೇಕು ಎಂದು ಸೂಚಿಸಲಾಗಿದೆ.

ಮುಖ್ಯಾಂಶಗಳು
* ಸುರಿದ ಕಸದಿಂದಾಗಿ ರಸ್ತೆ ಸಂಚಾರಕ್ಕೂ ಅಡಚಣೆ
* ಪೂರಕವಾಗಿ 700 ಫೋಟೊ ಸಲ್ಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.