ADVERTISEMENT

ರೈತರಿಗೆ ಉತ್ತಮ ತಂತ್ರಜ್ಞಾನ ತಲುಪಿಸಲು ಕರೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 19:35 IST
Last Updated 16 ಅಕ್ಟೋಬರ್ 2011, 19:35 IST

ಯಲಹಂಕ: `ಉತ್ತಮ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ತಲುಪಿಸುವ ಮೂಲಕ ಸರಿಯಾದ ರೀತಿಯಲ್ಲಿ ಅವರನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರೆ ದೇಶದಲ್ಲಿರುವ ಭ್ರಷ್ಟಾಚಾರ ತೊಲಗಿ ಬಡತನ ನಿರ್ಮೂಲನೆಯಾಗಲಿದೆ~ ಎಂದು ಸೆಲ್ಕೋ ಸೋಲಾರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಹರೀಶ್ ಹಂದೆ ಅಭಿಪ್ರಾಯಪಟ್ಟರು.

ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ವಿಶ್ವವಿದ್ಯಾಲಯಗಳು, `ಪುನರ್ಬಳಕೆ ಶಕ್ತಿ ಸೇರಿದಂತೆ ಲಭ್ಯವಿರುವ ಸಂಪನ್ಮೂಲಗಳನ್ನು ಕ್ರೋಡೀಕರಿಸಿಕೊಂಡು ಎಲ್ಲ ವರ್ಗದ ಜನರನ್ನು ಕೃಷಿಯಲ್ಲಿ ಸಕ್ರಿಯವಾಗಿ ತೊಗಿಸಿಕೊಳ್ಳುವಂತೆ ಮಾಡಿದರೆ ಭಾರತ ಪ್ರಪಂಚದಲ್ಲಿ ಅತ್ಯಂತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲಿದೆ~ ಎಂದು ತಿಳಿಸಿದರು.

ಕೃಷಿ ಇಲಾಖೆ ಕಾರ್ಯದರ್ಶಿ ಡಾ.ಸಂದೀಪ್ ದವೆ ಮಾತನಾಡಿದರು. ವಿವಿ ಕುಲಪತಿ ಡಾ.ಕೆ.ನಾರಾಯಣಗೌಡ ಅಧ್ಯಕ್ಷತೆ ವಹಿಸಿದ್ದರು.

ಪ್ರಶಸ್ತಿ ಪ್ರದಾನ: ಮುಸುಕಿನ ಜೋಳದ ಸಂಶೋಧನೆ ಮತ್ತು ಆಡಳಿತ ಕೌಶಲ್ಯವನ್ನು ಪರಿಗಣಿಸಿ ಡಾ.ಕೆ.ಟಿ.ಪಾಂಡುರಂಗೇಗೌಡ ಅವರಿಗೆ ನಾಗಮ್ಮ ದತ್ತಾತ್ರೇಯರಾವ್ ದೇಸಾಯಿ ಪ್ರಶಸ್ತಿ, ತೊಗರಿ, ಅವರೆ ಮತ್ತು ಹುಚ್ಚೆಳ್ಳಿನ ಸಂಶೋಧನೆ ಪರಿಗಣಿಸಿ ಡಾ.ಎಂ.ಬೈರೇಗೌಡ ಅವರಿಗೆ ಡಾ.ಕಾಳಯ್ಯ ಕೃಷ್ಣಮೂರ್ತಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ಕೃಷಿ ವಿಸ್ತರಣಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಪರಿಗಣಿಸಿ ಡಾ.ಕೆ.ಎನ್.ಶ್ರೀನಿವಾಸಪ್ಪ ಅವರಿಗೆ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಅಲ್ಲದೆ, ಬಿ.ಆರ್.ಚಂದ್ರಶೇಖರ್ ಮತ್ತು ಸಿದ್ದಗಂಗಪ್ಪ ಅವರಿಗೆ ಅತ್ಯುತ್ತಮ ಸೇವಾ ಸಿಬ್ಬಂದಿ ಪ್ರಶಸ್ತಿ ಹಾಗೂ ಡಾ.ವಿ.ಆರ್.ರಾಮಕೃಷ್ಣ ಪರಮ, ಪಿ.ಎಸ್.ಶ್ರೀಕಂಠಮೂರ್ತಿ ಮತ್ತು ಡಾ.ಸಿ.ಜೆ.ಶ್ರೀಧರ್ ಅವರಿಗೆ `ಅತ್ಯುತ್ತಮ ಪ್ರಾಧ್ಯಾಪಕ ಪ್ರಶಸ್ತಿ~ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.