ADVERTISEMENT

ರೌಡಿ ಲಕ್ಷ್ಮಣ ಕೊಂದವರ ಮೇಲೆ ‘ಕೋಕಾ’

​ಪ್ರಜಾವಾಣಿ ವಾರ್ತೆ
Published 29 ಮೇ 2019, 20:20 IST
Last Updated 29 ಮೇ 2019, 20:20 IST
ಹೇಮಂತ್
ಹೇಮಂತ್   

ಬೆಂಗಳೂರು: ಕುಖ್ಯಾತ ರೌಡಿ ಲಕ್ಷ್ಮಣ ಕೊಲೆ ಪ್ರಕರಣದ ಆರೋಪಿಗಳಾದ ರಾಜ ಅಲಿಯಾಸ್ ಕ್ಯಾಟ್ ರಾಜ ಹಾಗೂ ಹೇಮಂತ್ ಅಲಿಯಾಸ್ ಹೇಮಿ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ –2000 (ಕೋಕಾ) ಅಡಿ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಹಾಲಕ್ಷ್ಮಿಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಮಾ. 7ರಂದು ಲಕ್ಷ್ಮಣನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು. ಆ ಸಂಬಂಧ ಯುವತಿ ಸೇರಿದಂತೆ 12 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.

‘ರಾಜ ಹಾಗೂ ಹೇಮಂತ್‌ ಪ್ರಕರಣದ ಪ್ರಮುಖ ಆರೋಪಿಗಳು. ದರೋಡೆ, ಕೊಲೆ, ಕೊಲೆ ಯತ್ನ, ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ ಇವರಿಬ್ಬರು ತಮ್ಮದೇ ಗ್ಯಾಂಗ್ ಕಟ್ಟಿಕೊಂಡು ಲಕ್ಷ್ಮಣನನ್ನು ಕೊಂದಿದ್ದರು. ಇವರಿಬ್ಬರು ಮುಂದೆಯೂ ಅಪ‍ರಾಧ ಚಟುವಟಿಕೆಯಲ್ಲಿ ತೊಡಗಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುವ ಸಾಧ್ಯತೆ ಇದೆ. ಅದೇ ಕಾರಣಕ್ಕೆ ಅವರಿಬ್ಬರ ವಿರುದ್ಧ ಕೋಕಾ ಅಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಕೊಲೆ ಪ್ರಕರಣದ ತನಿಖೆ ಕೈಗೊಂಡ ಆರಂಭದಲ್ಲಿ ವರ್ಷಿಣಿ ಎಂಬಾಕೆಯನ್ನು ಬಂಧಿಸಲಾಗಿತ್ತು. ತನ್ನ ಪ್ರಿಯಕರ ರೂಪೇಶ್ ಜೊತೆ ಸೇರಿ ಲಕ್ಷ್ಮಣನ ಕೊಲೆಗೆ ಆಕೆ ಸುಪಾರಿ ನೀಡಿದ್ದಳು. ಇತರೆ ಆರೋಪಿಗಳು ನಡುರಸ್ತೆಯಲ್ಲಿ ಲಕ್ಷ್ಮಣನ ಕಾರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.