ADVERTISEMENT

ಲೈಂಗಿಕ ಕಿರುಕುಳ: ಹಿರಿಯ ಅಧಿಕಾರಿಗಳಿಗೆ ದೂರು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ಬೆಂಗಳೂರು: ಪಾನಮತ್ತ ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಲೈಂಗಿಕ ಕಿರುಕುಳ ನೀಡಿದರು ಎಂದು ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ಮಣಿಪುರ ಮೂಲದ ಸ್ವರ್ ಥೌನೋಜಂ ಅವರು ಶನಿವಾರ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ.

`ದಕ್ಷಿಣ ವಿಭಾಗದ ಡಿಸಿಪಿ ಎಚ್.ಎಸ್.ರೇವಣ್ಣ ಅವರನ್ನು ಭೇಟಿ ಮಾಡಿ ಘಟನೆ ಬಗ್ಗೆ ವಿವರಿಸಿದ್ದೇನೆ. ಪ್ರಕರಣದ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ, ನನ್ನ ಕಾರಿಗೆ ಬೈಕ್ ಗುದ್ದಿಸಿದ್ದ ಮೋಹನ್ ವೇಲು ಎಂಬುವರನ್ನು ಪೊಲೀಸರು ಈಗಾಗಲೇ ಪತ್ತೆ ಮಾಡಿದ್ದು, ಉಳಿದ ಆರೋಪಿಗಳ ಹುಡುಕಾಟ ನಡೆಯುತ್ತಿರುವುದಾಗಿ ತಿಳಿಸಿದ್ದಾರೆ' ಎಂದು ಸ್ವರ್ ಮಾಹಿತಿ ನೀಡಿದರು.

ಘಟನೆ ಸಂಬಂಧ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಮೋಹನ್ ವೇಲು `ಸ್ವರ್ ಅವರ ಕಾರಿಗೆ ಬೈಕ್ ಗುದ್ದಿಸಿದ್ದು ನಿಜ. ಆದರೆ, ಅಪಘಾತಕ್ಕೆ ಅವರೇ ಕಾರಣ' ಎಂದು ಹೇಳಿದರು.

`ಬುಧವಾರ ರಾತ್ರಿ ಡಿ.ವಿ.ಜಿ. ರಸ್ತೆ ಮಾರ್ಗವಾಗಿ ಬೈಕ್‌ನಲ್ಲಿ ಹೋಗುತ್ತಿದ್ದೆ. ನನ್ನ ಮುಂದೆಯೇ ಸ್ವರ್ ಅವರ ಕಾರು ವೇಗವಾಗಿ ಚಲಿಸುತ್ತಿತ್ತು. ನೆಟ್ಟಕಲ್ಲಪ್ಪ ವೃತ್ತದ ಸಿಗ್ನಲ್‌ನಲ್ಲಿ ಕೆಂಪು ದೀಪ ಬೀಳುವ ಮೊದಲೇ ಸಿಗ್ನಲ್ ದಾಟಬೇಕು ಎಂದು ಅವರು ವಾಹನದ ವೇಗವನ್ನು ಮತ್ತಷ್ಟು ಹೆಚ್ಚಿಸಿದರು. ನಾನೂ ಕೂಡ ಮೊದಲೇ ಸಿಗ್ನಲ್ ದಾಟಬೇಕು ಎಂದು ಕಾರಿನ ಹಿಂದೆಯೇ ವೇಗವಾಗಿ ಬೈಕ್ ಓಡಿಸಿದೆ. ಆದರೆ, ಕೆಂಪು ದೀಪ ಬಿದ್ದ ಕಾರಣ, ಸ್ವರ್ ಒಮ್ಮೆಲೇ ಬ್ರೇಕ್ ಹಾಕಿದರು. ಆಗ ನಿಯಂತ್ರಣ ಕಳೆದುಕೊಂಡ ನಾನು ಕಾರಿಗೆ ಬೈಕ್‌ಗೆ ಗುದ್ದಿಸಿದೆ' ಎಂದು ಮೋಹನ್ ವೇಲು ತಿಳಿಸಿದರು.

ಕರ್ತವ್ಯ ನಿರ್ವಹಿಸುವುದು ಹೇಗೆ ? `ಸಂಚಾರ ನಿರ್ವಹಣೆಯೇ ನಮ್ಮ ಕರ್ತವ್ಯ. ಆದರೆ, ಅದೇ ನಿಟ್ಟಿನಲ್ಲಿ ಕೆಲಸ ಮಾಡಿದ ನನ್ನ ಮೇಲೆಯೇ ಪ್ರಕರಣ ದಾಖಲಾಗಿದೆ. ಇದರಿಂದಾಗಿ ಯಾವ ರೀತಿ ಕರ್ತವ್ಯ ನಿರ್ವಹಿಸಬೇಕು ಗೊತ್ತಾಗುತ್ತಿಲ್ಲ' ಎಂದು ಬಸವನಗುಡಿ ಸಂಚಾರ ಠಾಣೆಯ ಕಾನ್‌ಸ್ಟೇಬಲ್ ಕೃಷ್ಣಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.