ADVERTISEMENT

ವಿವಿಧೆಡೆ ಮಳೆ: ಸಂಚಾರ ಅಸ್ತವ್ಯಸ್ತ-ಸೋರಿದ ಬಸ್‌ಗಳು

​ಪ್ರಜಾವಾಣಿ ವಾರ್ತೆ
Published 25 ಜೂನ್ 2011, 20:00 IST
Last Updated 25 ಜೂನ್ 2011, 20:00 IST
ವಿವಿಧೆಡೆ ಮಳೆ: ಸಂಚಾರ ಅಸ್ತವ್ಯಸ್ತ-ಸೋರಿದ ಬಸ್‌ಗಳು
ವಿವಿಧೆಡೆ ಮಳೆ: ಸಂಚಾರ ಅಸ್ತವ್ಯಸ್ತ-ಸೋರಿದ ಬಸ್‌ಗಳು   

ಬೆಂಗಳೂರು:  ನಗರದ ವಿವಿಧೆಡೆ ಶನಿವಾರ ಸಂಜೆ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಸಂಚಾರಕ್ಕೆ ವ್ಯತ್ಯಯವಾಗಿತ್ತು. ಇದರಿಂದ ಗಂಟೆಗಟ್ಟಲೇ ಟ್ರಾಫಿಕ್ ಜಾಮ್‌ನ ಬಿಸಿಯನ್ನೂ ವಾಹನ ಸವಾರರು ಅನುಭವಿಸಬೇಕಾಯಿತು.

ಮೊದಲು ಅರ್ಧ ಗಂಟೆ ಸುರಿದ ಜೋರಾದ ಮಳೆ ಹಾಗೂ ನಂತರ ಎರಡು ಗಂಟೆ ಸುರಿದ ಜಿಟಿ ಜಿಟಿ ಮಳೆಯಿಂದಾಗಿ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ತೀವ್ರ ತೊಂದರೆಗೆ ಒಳಗಾದರು.

ನಗರದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿಯ ತಗ್ಗು ಪ್ರದೇಶದಲ್ಲಿ ನೀರು ತುಂಬಿಕೊಂಡಿದ್ದರಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಮ್ಯಾಗ್ರತ್ ರಸ್ತೆ, ಮಿಷನ್ ರಸ್ತೆ, ಸಾಯಿ ಬಾಬಾ ರಸ್ತೆ, ಶಿವಾನಂದ ವೃತ್ತದ ಬಳಿಯ ರೈಲ್ವೆ ಸೇತುವೆ ಕೆಳಗೂ ನೀರು ತುಂಬಿಕೊಂಡಿತ್ತು.

ಸೋರುವ ಬಸ್ಸುಗಳಿಗೆ ಬಸವಳಿದವರು: ಹೊರಗಡೆ ಮಳೆ ಸುರಿಯುತ್ತಿದ್ದರೆ, ತಮ್ಮ ಮನೆಗಳನ್ನು ತಲುಪಲು ಬಿಎಂಟಿಸಿ ಬಸ್ಸುಗಳನ್ನು ಅವಲಂಬಿಸಿದ್ದ ಪ್ರಯಾಣಿಕರಿಗೆ ಕೆಲ ಹಳೆಯ ಬಸ್ಸುಗಳು ರಕ್ಷಣೆ ನೀಡಲಿಲ್ಲ.

ಬಹುತೇಕ ಬಸ್ಸುಗಳು ಕಿಟಕಿ ಗಾಜುಗಳು ಒಡೆದದ್ದರಿಂದ ಮಳೆ ನೀರು ಸೀಟುಗಳ ಮೇಲೆ ಹರಿಯಿತು, ಇದರಿಂದಾಗಿ ಪ್ರಯಾಣಿಕರು ನಿಂತುಕೊಂಡೇ ಪ್ರಯಾಣಿಸಬೇಕಾಯಿತು. ಮತ್ತೆ ಕೆಲವು ಬಸ್ಸುಗಳ ಮೇಲ್ಛಾವಣೆಯ ಮೂಲಕ ನೀರು ಸೋರುತ್ತಿದ್ದುದರಿಂದ ಬಸ್ಸುಗಳು ನೀರಿನಿಂದಾವೃತವಾಗಿದ್ದವು.

ಬಾಣಸವಾಡಿ ಸಮೀಪದ ರಸ್ತೆಯಲ್ಲಿ ಮರವೊಂದು ರಾತ್ರಿ 10.30ರ ಸುಮಾರಿಗೆ ಉರುಳಿಬಿದ್ದಿದ್ದು, ನಂತರ ಬಿಬಿಎಂಪಿ ಸಿಬ್ಬಂದಿ ಅದನ್ನು ತೆರವುಗೊಳಿಸಿದರು ಎಂದು ಪಾಲಿಕೆ ಮೂಲಗಳು ತಿಳಿಸಿವೆ.

2 ಸೆಂ.ಮೀ. ಮಳೆ: ಒಟ್ಟು 2 ಸೆಂಟಿ ಮೀಟರ್ (17.9 ಮಿಲಿ ಮೀಟರ್) ಮಳೆ ನಗರದಲ್ಲಿ ದಾಖಲಾಗಿದ್ದು, ಎಚ್‌ಎಎಲ್ ವಿಮಾನ ನಿಲ್ದಾಣದ ಬಳಿ 4.1  ಸೆಂ.ಮೀ. (38 ಮಿ.ಮೀ.) ದಾಖಲಾಗಿದೆ. ಭಾನುವಾರವೂ ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.