ADVERTISEMENT

ವೃದ್ಧೆಯ ಬೆದರಿಸಿ ಚಿನ್ನಾಭರಣ ಕದ್ದೊಯ್ದರು

ಹೆಲ್ಮೆಟ್‌ ಧರಿಸಿದ್ದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 16 ಮೇ 2018, 19:48 IST
Last Updated 16 ಮೇ 2018, 19:48 IST

ಬೆಂಗಳೂರು: ಚಂದ್ರಾಲೇಔಟ್‌ ಬಳಿಯ ಹೊಸ ಆದಾಯ ತೆರಿಗೆ ಬಡಾವಣೆಯ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳಿಬ್ಬರು, ವೃದ್ಧೆಯೊಬ್ಬರನ್ನು ಬೆದರಿಸಿ ಚಿನ್ನಾಭರಣ ಕದ್ದೊಯ್ದಿದ್ದಾರೆ.

ಮೇ 12ರಂದು ಈ ಘಟನೆ ನಡೆದಿದೆ. ಮನೆ ಮಾಲೀಕ ಜಗನ್ನಾಥ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.

‘ಪತ್ನಿ, ತಂದೆ–ತಾಯಿ ಹಾಗೂ ಮಕ್ಕಳ ಜತೆಯಲ್ಲಿ ಜಗನ್ನಾಥ್ ವಾಸವಿದ್ದಾರೆ. ಅವರು ಪತ್ನಿ ಜತೆಯಲ್ಲಿ ಮೇ 12ರಂದು ಕೆಲಸ ನಿಮಿತ್ತ ಹೊರಗೆ ಹೋಗಿದ್ದರು.

ADVERTISEMENT

ಆಗ ತಂದೆ–ತಾಯಿ ಹಾಗೂ ಮಕ್ಕಳು ಮಾತ್ರ ಮನೆಯಲ್ಲಿದ್ದರು. ಆ ಸಂದರ್ಭದಲ್ಲೇ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಕೃತ್ಯ ಎಸಗಿ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಮಕ್ಕಳು ಕೊಠಡಿಯಲ್ಲಿ ಆಟವಾಡುತ್ತಿದ್ದರು. ನಡುಮನೆಯಲ್ಲಿ ತಾಯಿ ಕುಳಿತುಕೊಂಡಿದ್ದರು. ಹೆಲ್ಮೆಟ್‌ ಧರಿಸಿಯೇ ಒಳಗೆ ಹೋಗಿದ್ದ ದುಷ್ಕರ್ಮಿಗಳು, ವೃದ್ಧೆಯನ್ನು  ಬೆದರಿಸಿದ್ದರು. ಕಿರುಚಾಡದಂತೆ ಅವರ ಬಾಯಿ ಅದುಮಿ ಹಿಡಿದಿದ್ದರು. ₹1.20 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಿತ್ತುಕೊಂಡಿದ್ದರು. ನಂತರ, ಮಹಿಳೆಯನ್ನು ತಳ್ಳಿ ಬೈಕ್‌ನಲ್ಲಿ ಪರಾರಿಯಾದರು’ ಎಂದರು.

’ಮನೆಯಿಂದ ಹೊರಬಂದಿದ್ದ ತಾಯಿ, ಕೂಗಾಡಿ ಸ್ಥಳೀಯರನ್ನು ಸೇರಿಸಿದ್ದರು. ಅಷ್ಟರಲ್ಲಿ ಆರೋಪಿಗಳು ಸ್ಥಳದಿಂದ ಹೊರಟು ಹೋಗಿದ್ದರು. ಸಂಜೆ ಜಗನ್ನಾಥ್‌ ಮನೆಗೆ ಬಂದಾಗಲೇ ವಿಷಯ ತಿಳಿಸಿದ್ದರು. ನಂತರವೇ ಅವರು ಠಾಣೆಗೆ ಬಂದು ದೂರು ನೀಡಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.