ಬೆಂಗಳೂರು: ‘ರಾಜಕೀಯ ಪ್ರಣಾಳಿಕೆ ಮತ್ತು ಸಾಹಿತ್ಯದ ನಡುವೆ ವ್ಯತ್ಯಾಸವಿದೆ. ಇದನ್ನು ಸಾಹಿತಿಗಳು ಕಂಡುಕೊಳ್ಳಬೇಕು’ ಎಂದು ಸಾಹಿತಿ ಬಿ.ಎ.ವಿವೇಕ ರೈ ಹೇಳಿದರು.
ಅಭಿನವ ಹಾಗೂ ಪಲ್ಲವ ಪ್ರಕಾಶನವು ನಗರದ ಕನ್ನಡ ಭವನದ ನಾಟಕ ಅಕಾಡೆಮಿಯ ಚಾವಡಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅವರದೇ ಕೃತಿಗಳಾದ ‘ಅರಿವು ಸಾಮಾನ್ಯವೆ’, ‘ನೆತ್ತರ ಮದುವೆ’, ‘ಇರುಳ ಕಣ್ಣು’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಜಕೀಯದ ಪ್ರಣಾಳಿಕೆಗಳಿಗೂ ಹಾಗೂ ಸಾಹಿತ್ಯದ ಆಲೋಚನೆಗಳಿಗೂ ಬಹಳಷ್ಟು ವ್ಯತ್ಯಾಸವಿದೆ. ಇದರಿಂದ ಸಾಹಿತ್ಯ ಮತ್ತು ರಾಜಕೀಯವನ್ನು ಒಂದು ಅಂತರವಿಟ್ಟುಕೊಂಡೇ ನೋಡಬೇಕು. ಸಾಹಿತಿಗಳು ರಾಜಕೀಯ ಪ್ರಣಾಳಿಕೆಯ ದಾಸರಾಗಬಾರದು’ ಎಂದು ನುಡಿದರು.
‘ಎಲ್ಲರೊಂದಿಗೆ ಸ್ನೇಹಿತರಂತೆ ಇರಬೇಕು. ಯಾರೊಂದಿಗೂ ದ್ವೇಷವನ್ನು ಸಾಧಿಸುವುದು ಸರಿಯಲ್ಲ. ನಮ್ಮ ನಿರ್ಧಾರಗಳ ಬಗ್ಗೆ ಖಚಿತತೆ ಇರಬೇಕು’ ಎಂದು ಹೇಳಿದರು.
‘ನನ್ನ ಬರವಣಿಗೆಯಿಂದ ಕೆಲವರು ನನ್ನನ್ನು ಎಡ ಪಂಥೀಯನೆಂದು ಗುರುತಿಸುತ್ತಾರೆ. ಆದರೆ. ನನಗೆ ನನ್ನ ಬರವಣಿಗೆ ಬಗೆಗೆ ಖಚಿತತೆಯಿದೆ’ ಎಂದು ಪ್ರತಿಪಾದಿಸಿದರು.
‘ಎಲ್ಲಾ ನೋವುಗಳ ನಡುವೆ ನಮ್ಮನ್ನು ಕಾಪಾಡುವುದು ಬರವಣಿಗೆ. ನನ್ನ ಮುಂದಿನ ಜೀವನವನ್ನು ಬರವಣಿಗೆಗಾಗಿ ಮೀಸಲಿಡುತ್ತೇನೆ’ ಎಂದರು
ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್, ‘ಅರಿವು ಸಾಮಾನ್ಯವೆ’ ಕೃತಿಯ ಕುರಿತು ಮಾತನಾಡಿ, ‘ಇತಿಹಾಸ- ಜನಪದದ ನಡುವಿನ ಭಿನ್ನತೆಯನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಭಿನ್ನ ಸಂಸ್ಕೃತಿ, ಭಿನ್ನ ಸಾಹಿತ್ಯಗಳ ವಿದ್ವತ್ತು, ಭಿನ್ನ ವಿಚಾರಗಳು ಕೂಡುವ ತಾಣವಾಗಿದ್ದು, ಇದೊಂದು ವೈಚಾರಿಕ ಲೇಖನಗಳ ಸಂಕಲನವಾಗಿದೆ’ ಎಂದರು.
ಲೇಖಕ ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ಇರುಳ ಕಣ್ಣು’ ಕೃತಿಯಲ್ಲಿ ‘ಧಾರ್ಮಿಕ ಮೂಲಭೂತವಾದದ ಬಗ್ಗೆ ವಿಸ್ತಾರತೆಯನ್ನು ಹೊಂದಿದೆ. ಕನ್ನಡ ಭಾಷೆ, ಸಾಹಿತ್ಯದ ಕುರಿತಾದ ಒಂದು ಉತ್ತಮ ಕೈಪಿಡಿಯಾಗಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.