ಬೆಂಗಳೂರು: ಬನ್ನೇರಘಟ್ಟ ರಸ್ತೆಯ ಮೈಕೊ ಫ್ಯಾಕ್ಟರಿ ಬಳಿ ಲಕ್ಕಸಂದ್ರ ಗ್ರಾಮದಲ್ಲಿ ಬಿಬಿಎಂಪಿ ಜಾಗವನ್ನು ಒತ್ತುವರಿ ಮಾಡಿಕೊಂಡು ಮಾರ್ಬಲ್ ಮಳಿಗೆಗಳನ್ನು ನಡೆಸಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಮೇಯರ್ ಎಂ.ಗೌತಮ್ ಕುಮಾರ್ ನೇತೃತ್ವದ ತಂಡ ಗುರುವಾರ ಸ್ಥಳ ಪರಿಶೀಲನೆ ನಡೆಸಿತು.
ಸರ್ವೆ ನಡೆಸಿ ಒತ್ತುವರಿಯಾಗಿರುವ ಸುಮಾರು 10 ಎಕರೆ 04 ಗುಂಟೆಗಳಷ್ಟು ಜಾಗವನ್ನು ಸ್ವಾಧೀನಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ಮೇಯರ್ ಸೂಚಿಸಿದರು.
‘ಖಾಸಗಿ ವ್ಯಕ್ತಿಯೊಬ್ಬರು ಈ ಜಾಗವನ್ನು ಅನೇಕ ವರ್ಷಗಳಿಂದ ಒತ್ತುವರಿ ಮಾಡಿಕೊಂಡು ಮಾರ್ಬಲ್ ಅಂಗಡಿಗಳನ್ನು ನಡೆಸಲು ಬಾಡಿಗೆಗೆ ನೀಡಿದ್ದಾರೆ. ಒತ್ತುವರಿ ಆಗಿರುವ ವಿಚಾರ ಅಧಿಕಾರಿಗಳಿಗೆ ಗೊತ್ತಿರದೇ ಇರಲಿಕ್ಕಿಲ್ಲ. ಇಷ್ಟು ದಿನ ಏಕೆ ಗಮನಿಸಲಿಲ್ಲ ಎಂಬುದು ಅಚ್ಚರಿಯ ವಿಷಯ. ಜಾಗ ಒತ್ತುವರಿಯಲ್ಲಿ ಅಧಿಕಾರಿಗಳು ಶಾಮೀಲಾಗಿದ್ದರೆ ತನಿಖೆ ನಡೆಸಿ ಅಂತಹವರ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳುವಂತೆ ವಿಶೇಷ ಆಯುಕ್ತ (ಆಸ್ತಿ) ಜಿ.ಮಂಜುನಾಥ್ ಅವರಿಗೆ ಸೂಚನೆ ನೀಡಿದ್ದೇನೆ’ ಎಂದು ಮೇಯರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.