ADVERTISEMENT

15 ದಿನಗಳಲ್ಲಿ 1,660 ಡೆಂಗಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 19:47 IST
Last Updated 17 ಜುಲೈ 2019, 19:47 IST
ಸಾಂರ್ಭಿಕ ಚಿತ್ರ
ಸಾಂರ್ಭಿಕ ಚಿತ್ರ   

ಬೆಂಗಳೂರು: ಮುಂಗಾರು ಮಳೆ ಪ್ರವೇಶಿಸುತ್ತಿದ್ದಂತೆಯೇ ರಾಜ್ಯದಲ್ಲಿ ಡೆಂಗಿ ಜ್ವರ ಪ್ರಕರಣಗಳು ಹೆಚ್ಚಾಗಿದ್ದು, 15 ದಿನಗಳಲ್ಲಿ 1,660 ಪ್ರಕರಣಗಳು ವರದಿಯಾಗಿವೆ.

ಈಡಿಸ್‌ ಸೊಳ್ಳೆಯಿಂದ ಹರಡುವ ಡೆಂಗಿ ಬಗ್ಗೆ ಆರೋಗ್ಯ ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರೂ ಜ್ವರದ ತೀವ್ರತೆ ಮಾತ್ರ ಕಡಿಮೆಯಾಗಿಲ್ಲ. ಕಳೆದ ವರ್ಷ ಈ ವೇಳೆಗೆ 2,079 ಮಂದಿ ಈ ಜ್ವರಕ್ಕೆ ಬಳಲಿ, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಈ ವರ್ಷ ಜ್ವರಕ್ಕೆ ಒಳಪಟ್ಟವರ ಸಂಖ್ಯೆ ದುಪ್ಪಟ್ಟಾಗಿದ್ದು, ಈವರೆಗೆ 4,718 ಮಂದಿ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆ ದಾಖಲಾಗಿದ್ದಾರೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 2,951 ಮಂದಿ ಡೆಂಗಿ ಜ್ವರದಿಂದ ಬಳಲಿದ್ದಾರೆ. ದಕ್ಷಿಣ ಕನ್ನಡ –319, ಶಿವಮೊಗ್ಗ –206, ಕಲಬುರ್ಗಿ –134, ಹಾವೇರಿ–129, ಹಾಸನ–107, ಚಿಕ್ಕಮಗಳೂರು–105 ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ADVERTISEMENT

‘ಮಳೆಗಾಲದಲ್ಲಿ ಸಹಜವಾಗಿ ಡೆಂಗಿ ಪ್ರಕರಣಗಳು ಹೆಚ್ಚಾಗುತ್ತವೆ. ಈಡಿಸ್ ಎಂಬ ಸೊಳ್ಳೆ ಕಚ್ಚುವುದರಿಂದ ಈ ಜ್ವರ ಬರುತ್ತದೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗ ಹರಡುತ್ತದೆ. ಹಗಲು ಹೊತ್ತಿನಲ್ಲಿ ಕಚ್ಚುವ ಈ ಸೊಳ್ಳೆ ಸಂಗ್ರಹಿಸಿಟ್ಟ ನೀರಿನಲ್ಲಿ ಮೊಟ್ಟೆ ಇಟ್ಟು, ಸಂತಾನೋತ್ಪತ್ತಿ ಮಾಡುತ್ತದೆ. ಜನರಲ್ಲಿ ಸ್ವಚ್ಛತೆ ಕುರಿತು ಇರುವ ಅಸಡ್ಡೆ ಹಾಗೂ ಜಾಗೃತಿ ಕೊರತೆ ರೋಗ ಹೆಚ್ಚಳಕ್ಕೆ ಪ್ರಮುಖ ಕಾರಣ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

**

ಜ್ವರದ ಲಕ್ಷಣಗಳು

l ದಿಢೀರ್ ಜ್ವರ

l ತಲೆನೋವು

l ಗಂಟಲು ನೋವು

l ವಾಂತಿ

l ಹೊಟ್ಟೆ ನೋವು

l ಮೈ-ಕೈ ನೋವು

l ಅತಿಸಾರ

l ಕರುಳಿನಲ್ಲಿ ರಕ್ತಸ್ರಾವ

l ಚರ್ಮದಲ್ಲಿ ಕೆಂಪು ಗುಳ್ಳೆ
**
ಮುಂಜಾಗ್ರತೆ ಕ್ರಮಗಳು

l ಯಾವುದೇ ರೀತಿಯ ಜ್ವರ ಕಂಡರೆ ನಿರ್ಲಕ್ಷಿಸದೆ ಚಿಕಿತ್ಸೆ ಪಡೆಯಿರಿ

l ಶುದ್ಧ ಹಾಗೂ ಕುದಿಸಿದ ನೀರನ್ನು ಕುಡಿಯುವುದು ಉತ್ತಮ

l ನೀರು ಶೇಖರಣಾ ತೊಟ್ಟಿ, ಟ್ಯಾಂಕ್‍ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಿ

l ಪಾತ್ರೆ ಹಾಗೂ ಬಿಂದಿಗೆಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಿಸಿಡಬೇಡಿ

l ಸೊಳ್ಳೆಗಳನ್ನು ತಡೆಯಲು ಕಿಟಕಿ ಬಾಗಿಲುಗಳಿಗೆ ಪರದೆ ಅಳವಡಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.