
ಬೆಂಗಳೂರು: ಮಹಿಳೆಯರ ಸುರಕ್ಷತೆ, ಮಾದಕ ವಸ್ತುಗಳ ನಿಯಂತ್ರಣ, ಸೈಬರ್ ಅಪರಾಧ ತಡೆ ಹಾಗೂ ಸಂಚಾರ ನಿರ್ವಹಣೆ ಕುರಿತು ನಗರ ಪೊಲೀಸ್ ಕಮಿಷನ್ರೇಟ್ ವ್ಯಾಪ್ತಿಯ 11 ವಿಭಾಗದ ಪೊಲೀಸರು, ಸೋಮವಾರ ವಿವಿಧ ಶಾಲಾ–ಕಾಲೇಜಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದರು.
ಪೂರ್ವ, ಪಶ್ಚಿಮ, ಆಗ್ನೇಯ, ವಾಯವ್ಯ, ನೈರುತ್ಯ, ಎಲೆಕ್ಟ್ರಾನಿಕ್ ಸಿಟಿ, ಉತ್ತರ, ದಕ್ಷಿಣ, ಕೇಂದ್ರ, ಈಶಾನ್ಯ ಹಾಗೂ ವೈಟ್ಫೀಲ್ಡ್ ವಿಭಾಗದ ಶಾಲಾ–ಕಾಲೇಜುಗಳಲ್ಲಿ ಏಕಕಾಲದಲ್ಲಿ ಜಾಗೃತಿ ಮೂಡಿಸಲಾಯಿತು. 1,250 ಶಾಲಾ– ಕಾಲೇಜುಗಳ ಸುಮಾರು 2.50 ಲಕ್ಷ ವಿದ್ಯಾರ್ಥಿಗಳು ಅರಿವು ಸಭೆಗಳಲ್ಲಿ ಪಾಲ್ಗೊಂಡಿದ್ದರು.
ಆಯಾ ವಿಭಾಗದ ಡಿಸಿಪಿಗಳು, ಎಸಿಪಿಗಳು, ಇನ್ಸ್ಪೆಕ್ಟರ್, ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿ ಅರಿವು ಮೂಡಿಸಿದರು.
ಆಗ್ನೇಯ ವಿಭಾಗದ 59 ಶಾಲೆಗಳು ಹಾಗೂ 24 ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆದಿದ್ದು, 11,515 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಾದಕ ದ್ರವ್ಯದಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ತಿಳಿಸಲಾಯಿತು. ಮಹಿಳೆ, ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ‘ರಾಣಿ ಚನ್ನಮ್ಮ ಪಡೆ’ಯಿಂದ ಸ್ವಯಂ ರಕ್ಷಣೆ ತಂತ್ರಗಳ ಬಗ್ಗೆ ತರಬೇತಿ ನೀಡಲಾಯಿತು.
ಮಹಿಳೆಯರು ಹಾಗೂ ಮಕ್ಕಳ ಪರವಾಗಿ ಇರುವ ಕಾನೂನುಗಳ ಬಗ್ಗೆಯೂ ತಿಳಿಸಲಾಯಿತು. ಇಲಾಖೆಯಿಂದ ಸ್ಥಾಪಿಸಲಾಗಿರುವ ಸಹಾಯವಾಣಿ ಬಗ್ಗೆಯೂ ಮಾಹಿತಿ ನೀಡಲಾಯಿತು ಎಂದು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ತಿಳಿಸಿದರು.
ಸುದ್ದಗುಂಟೆಪಾಳ್ಯ ಠಾಣೆಯ ಪೊಲೀಸರು ತಮ್ಮ ವ್ಯಾಪ್ತಿಯ ಶಾಲಾ–ಕಾಲೇಜುಗಳಿಗೆ ಭೇಟಿ ನೀಡಿ ಸೈಬರ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರಿವು ಮೂಡಿಸಿದರು.
ಉದ್ಯೋಗದ ಆಮಿಷವೊಡ್ಡಿ ವಂಚನೆ, ವೆಬ್ಸೈಟ್ನ ನಕಲಿ ಲಿಂಕ್ ಕಳಹಿಸಿ ಮೋಸ, ಒಎಲ್ಎಕ್ಸ್ ವಂಚನೆ, ವಿಮೆಗೆ ಸಂಬಂಧಿಸಿದ ವಂಚನೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.
‘ಮಾದಕ ವಸ್ತುಗಳ ನಿಯಂತ್ರಣ ಸಮಿತಿ ರಚಿಸುವಂತೆ ಶಾಲಾ– ಕಾಲೇಜುಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಡ್ರಗ್ಸ್ ಫ್ರೀ ಕರ್ನಾಟಕ ಆ್ಯಪ್ ಮೂಲಕ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದವರ ಬಗ್ಗೆ ದೂರು ನೀಡಬಹುದೆಂದು ಜಾಗೃತಿ ಸಭೆಗಳಲ್ಲಿ ತಿಳಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
ತುರ್ತು ಸಹಾಯವಾಣಿ ಸಂಖ್ಯೆಗಳು
112 – ತುರ್ತು ನಿರ್ವಹಣಾ ಸಹಾಯವಾಣಿ (ಇಆರ್ಎಸ್ಎಸ್)1930 –ಸೈಬರ್ ವಂಚನೆ ಸಹಾಯವಾಣಿ1933 –ರಾಷ್ಟ್ರೀಯ ಮಾದಕ ವಸ್ತು ಸಹಾಯವಾಣಿ 14490 –ರಾಷ್ಟ್ರೀಯ ಮಹಿಳಾ ಸಹಾಯವಾಣಿ1098 –ಮಕ್ಕಳ ಸಹಾಯವಾಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.