ADVERTISEMENT

ಸುಸ್ಥಿರ ಅಭಿವೃದ್ಧಿ, ಸಾಮಾಜಿಕ ಸಮಾನತೆಗೆ ಕೊಡುಗೆ ನೀಡಿ: ನ್ಯಾ. ಪಿ.ಬಿ.ಭಜಂತ್ರಿ

ಬೆಂಗಳೂರು ನಗರ ವಿವಿ 4ನೇ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 15:51 IST
Last Updated 11 ಜೂನ್ 2025, 15:51 IST
<div class="paragraphs"><p>ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ನಡೆದ ಬೆಂಗಳೂರು ನಗರ ವಿಶ್ವವಿದ್ಯಾಲಯ 4ನೇ ಘಟಿಕೋತ್ಸವ ಸಮಾರಂಭದಲ್ಲಿ ಬಿ.ಕಾಂನಲ್ಲಿ 3 ಚಿನ್ನದ ಪದಕ ಪಡೆದ ಸಂಜನಾ ಆರ್.ಎಸ್., ಎಂ.ಎಸ್ಸಿ ರಸಾಯನ ವಿಜ್ಞಾನದಲ್ಲಿ 5 ಚಿನ್ನದ ಪದಕ ಪಡೆದ ಅನುಷಾ ಎಸ್. ಮತ್ತು ಬಿಬಿಎ ಪದವಿಯಲ್ಲಿ&nbsp; 3 ಚಿನ್ನದ ಪದಕ ಪಡೆದ ಮನನ್ ಜೈನ್ ಸಂಭ್ರಮಿಸಿದ ಕ್ಷಣ </p></div>

ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ನಡೆದ ಬೆಂಗಳೂರು ನಗರ ವಿಶ್ವವಿದ್ಯಾಲಯ 4ನೇ ಘಟಿಕೋತ್ಸವ ಸಮಾರಂಭದಲ್ಲಿ ಬಿ.ಕಾಂನಲ್ಲಿ 3 ಚಿನ್ನದ ಪದಕ ಪಡೆದ ಸಂಜನಾ ಆರ್.ಎಸ್., ಎಂ.ಎಸ್ಸಿ ರಸಾಯನ ವಿಜ್ಞಾನದಲ್ಲಿ 5 ಚಿನ್ನದ ಪದಕ ಪಡೆದ ಅನುಷಾ ಎಸ್. ಮತ್ತು ಬಿಬಿಎ ಪದವಿಯಲ್ಲಿ  3 ಚಿನ್ನದ ಪದಕ ಪಡೆದ ಮನನ್ ಜೈನ್ ಸಂಭ್ರಮಿಸಿದ ಕ್ಷಣ

   

–ಪ್ರಜಾವಾಣಿ ಚಿತ್ರ.

ಬೆಂಗಳೂರು: ‘ವೃತ್ತಿಪರ ಜೀವನ ನಿರಂತರ ಕಲಿಕೆಯ ಪ್ರಕ್ರಿಯೆ. ನೀವೆಲ್ಲ ಹೊಸ ಆಲೋಚನೆಗಳಿಗೆ ಮುಕ್ತವಾಗಿದ್ದು, ಸವಾಲುಗಳನ್ನು ಬೆಳವಣಿಗೆಗೆ ಅವಕಾಶಗಳನ್ನಾಗಿ ಸ್ವೀಕರಿಸಿ. ಜ್ಞಾನದ ಅನ್ವೇಷಣೆ ನಿರಂತರವಾಗಿರಲಿ’ ಎಂದು ಬಿಹಾರದ ಪಟ್ನಾ ಹೈಕೋರ್ಟ್‌ನ ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ ಅವರು ನವ ಪದವೀಧರರಿಗೆ ಕಿವಿಮಾತು ಹೇಳಿದರು.

ADVERTISEMENT

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ನಡೆದ ಬೆಂಗಳೂರು ನಗರ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವದಲ್ಲಿ ಭಾಷಣ ಮಾಡಿದ ಅವರು, ‘ಸಹಾನುಭೂತಿ, ಸಮಗ್ರತೆ ಮತ್ತು ಸಾಮಾಜಿಕ ಜವಾಬ್ದಾರಿಯ ಬಲವಾದ ಪ್ರಜ್ಞೆಯನ್ನು ಬೆಳೆಸಿಕೊಳ್ಳಿ’ ಎಂದು ಸಲಹೆ ನೀಡಿದರು.

‘ಈ ಘಟಿಕೋತ್ಸವ ಅಂತ್ಯವಲ್ಲ, ಅದ್ಭುತ ಆರಂಭ. ಪದವಿಗಳು ಕೇವಲ ಕಾಗದದ ತುಂಡುಗಳಲ್ಲ. ನಿಮ್ಮ ಕಠಿಣ ಪರಿಶ್ರಮ ಮತ್ತು ನಿಮ್ಮ ದೃಢ ನಿಶ್ಚಯಕ್ಕೆ ಮಾಡಿದ ಹೂಡಿಕೆಗಳು. ನಿಮ್ಮ ಶಿಕ್ಷಣ ನಿಜವಾದ ಮೌಲ್ಯ, ನೀವು ಅದನ್ನು ಹೇಗೆ ಅನ್ವಯಿಸಲು ಆಯ್ದುಕೊಳ್ಳುತ್ತೀರಿ ಎಂಬುದರಲ್ಲಿ ಅಡಗಿದೆ’ ಎಂದರು.

'ಭವಿಷ್ಯದಲ್ಲಿ ತಂತ್ರಜ್ಞಾನ, ಸಾರ್ವಜನಿಕ ಸೇವೆ, ಕಲೆ ಅಥವಾ ವಾಣಿಜ್ಯ ವ್ಯವಹಾರದಲ್ಲಿ ವೃತ್ತಿಜೀವನವನ್ನು ಆರಿಸಿಕೊಂಡರೂ, ಸ್ಥಳೀಯ ಆದ್ಯತೆಯ ಬಗ್ಗೆ ತಿಳಿವಳಿಕೆಯನ್ನು ಬೆಳಸಿಕೊಳ್ಳಿ. ಪ್ರಾದೇಶಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಸುಸ್ಥಿರ ಅಭಿವೃದ್ಧಿ, ಸಾಮಾಜಿಕ ಸಮಾನತೆ ಮತ್ತು ಸಾಂಸ್ಕೃತಿಕ ಸಂರಕ್ಷಣೆಗೆ ಕೊಡುಗೆ ನೀಡಿ’ ಎಂದು ಸಲಹೆ ನೀಡಿದರು.

‘ಸ್ಮಾರ್ಟ್‌ ಸಿಟಿ ಅಭಿವೃದ್ಧಿ ಮತ್ತು ಗ್ರಾಮೀಣ ಜೀವನದ ಸುಧಾರಣೆ, ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಇತರ ರಾಜ್ಯಗಳ ಸಮುದಾಯಕ್ಕೆ ಕನ್ನಡ ಭಾಷೆಯ ಕಲಿಕೆಗೆ ಅಗತ್ಯ ಸಾಧನಗಳನ್ನು ರೂಪಿಸುವ ಕಡೆ ಗಮನ ಕೊಡಿ’ ಎಂದು ತಿಳಿಸಿದರು.

‘ನೊಂದವರ ಧ್ವನಿಯಾಗಿರಿ ಮತ್ತು ಸಮಗ್ರತೆಯಿಂದ ವರ್ತಿಸಿ. ಸಾರ್ವಜನಿಕ ಸಂವಾದವನ್ನು ರೂಪಿಸುವಲ್ಲಿ ಮತ್ತು ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ, ವಿಶೇಷವಾಗಿ ಎಲ್ಲ ರೀತಿಯ ಅಸಮಾನತೆಗಳನ್ನು ಎದುರಿಸುವಾಗ ನಿಮ್ಮ ಧ್ವನಿ ಎಂದಿಗೂ ಕಡಿಮೆಯಾಗದಿರಲಿ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪದವಿ, ಸ್ನಾತಕೋತ್ತರ ಪದವಿಯಲ್ಲಿ ರ‍್ಯಾಂಕ್ ಪಡೆದವರಿಗೆ ಚಿನ್ನದ ಪದಕ ಮತ್ತು ನಗದು ಬಹುಮಾನ ನೀಡಲಾಯಿತು. 

ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಕೆ.ಆರ್.ಜಲಜಾ, ಕುಲಚಿವ (ಮೌಲ್ಯಮಾಪನ) ಪ್ರೊ.ರಮೇಶ್ ಬಿ., ವಿವಿಧ ವಿಭಾಗಗಳ ಡೀನ್‌ಗಳು ಮತ್ತು ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.

’ಮಾತೃಭಾಷೆಯಲ್ಲಿ ಶಿಕ್ಷಣ’

‘ಕನಸನ್ನು ಸಾಕಾರ ಮಾಡಲು ಶಿಕ್ಷಣ ಅತ್ಯಂತ ಮಹತ್ವದ ಆಯುಧವಾಗಿದ್ದು ವ್ಯಕ್ತಿಯ ಜೀವನವನ್ನು ಅರ್ಥಪೂರ್ಣಗೊಳಿಸುತ್ತದೆ. ಉದ್ಯೋಗ ನೈತಿಕತೆ ಹೊಸ ವಿಚಾರ ಜ್ಞಾನವನ್ನು ನೀಡುತ್ತದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಹೇಳಿದರು. ರ‍್ಯಾಂಕ್‌ ಪಡೆದ ಪದವೀಧರರಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು ‘ಜಪಾನ್ ರಷ್ಯಾ ಜರ್ಮನಿ ಫ್ರಾನ್ಸ್‌ ಮುಂತಾದ ದೇಶಗಳಲ್ಲಿ ಆ ದೇಶದ ಮಾತೃಭಾಷೆಯಲ್ಲಿ ಶಿಕ್ಷಣ ನೀಡಲಾಗುತ್ತದೆ. ನಮ್ಮ ದೇಶದಲ್ಲೂ ಪ್ರಾದೇಶಿಕ ಭಾಷೆಗೆ ಮಹತ್ವ ನೀಡಬೇಕು. ಈ ನಿಟ್ಟಿನಲ್ಲಿನಲ್ಲಿ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಇದರಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ವಿಶೇಷ ಒತ್ತು ನೀಡಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.