ADVERTISEMENT

ತಿಂಗಳಾಂತ್ಯದಲ್ಲಿ ಮೋದಿ– ರಾಹುಲ್‌ ಅಬ್ಬರ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 19:31 IST
Last Updated 5 ಜನವರಿ 2018, 19:31 IST
ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ
ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಿಂಗಳಾಂತ್ಯದಲ್ಲಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

ವಿಧಾನಸಭಾ ಚುನಾವಣೆಯ ಕಾವು ನಿಧಾನಕ್ಕೆ ಏರುತ್ತಿದ್ದು, ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು ರಾಷ್ಟ್ರೀಯ ಪಕ್ಷದ ಇಬ್ಬರು ನಾಯಕರು ರಾಜ್ಯದ ಕಡೆಗೆ ಮುಖ ಮಾಡಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ನವಕರ್ನಾಟಕ ‍‍ಪರಿವರ್ತನಾ ಯಾತ್ರೆ ಸಮಾರೋಪ ಹಾಗೂ ಕಾರ್ಯಕರ್ತರ ಬೃಹತ್‌ ಸಮಾವೇಶ ಇದೇ 28ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಇದರಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.

ADVERTISEMENT

ಇದೇ 21, 22 ಮತ್ತು 23ರಂದು ರಾಹುಲ್‌ ಗಾಂಧಿ ರಾಜ್ಯ ಪ್ರವಾಸ ನಿಗದಿಯಾಗಿತ್ತು. 23ರಂದು ಬೆಂಗಳೂರಿನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿದ್ದವು.

ಮೋದಿ ಬರುವ ಮೊದಲೇ ರಾಹುಲ್‌ ರಾಜ್ಯಕ್ಕೆ ಬಂದರೆ ಪಕ್ಷಕ್ಕೆ ಅನುಕೂಲ ಆಗುವುದಿಲ್ಲ. ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಕುರಿತು ರಾಹುಲ್‌ ಮಾಡಬಹುದಾದ ಎಲ್ಲ ಆರೋಪಗಳಿಗೆ ಮೋದಿ ಉತ್ತರ ನೀಡುತ್ತಾರೆ. ಪಕ್ಷದ ಅಧ್ಯಕ್ಷರ ಭಾಷಣಕ್ಕೆ ಹೆಚ್ಚಿನ ಕಿಮ್ಮತ್ತು ಸಿಗಲಾರದು ಎಂಬ ಲೆಕ್ಕಾಚಾರ ಹಾಕಿ ಕಾರ್ಯತಂತ್ರ ಬದಲಿಸಲಾಗಿದೆ.

ಈ ಕಾರಣದಿಂದಾಗಿ, ಮೋದಿ ಬಂದು ಹೋದ ಮಾರನೇ ದಿನ ಜ.29ರಂದು ಕಾಂಗ್ರೆಸ್ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಮೋದಿ ನಡೆಸಬಹುದಾದ ವಾಗ್ದಾಳಿ ಹಾಗೂ ಬಿಜೆಪಿ ಸಮರ್ಥನೆಗೆ ರಾಷ್ಟ್ರೀಯ ಅಧ್ಯಕ್ಷರಿಂದ ಉತ್ತರ ಕೊಡಿಸುವುದು ಪಕ್ಷದ ನಾಯಕರ ಅಪೇಕ್ಷೆ ಎಂದೂ ಮೂಲಗಳು ವಿವರಿಸಿವೆ.

ಜ.27ಕ್ಕೆ ರಾಜ್ಯಕ್ಕೆ ಬರಲಿರುವ ರಾಹುಲ್‌, ಹೊಸಪೇಟೆಯಲ್ಲಿ ನಡೆಯಲಿರುವ ಪರಿಶಿಷ್ಟ ಜಾತಿ, ಪಂಗಡದವರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. 28ರಂದು ಚಿಕ್ಕಬಳ್ಳಾಪುರ ಜಿಲ್ಲೆ ವಿದುರಾಶ್ವತ್ಥದಲ್ಲಿ ರೈತರ ಜತೆ ಹಾಗೂ ಮೈಸೂರಿನಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.