ಬೆಂಗಳೂರು: ‘ಪೊಲಿಯೋವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಚಂದ್ರಶೇಖರ್ ಮನವಿ ಮಾಡಿದರು.
ರಾಷ್ಟ್ರೀಯ ಪಲ್ಸ್ ಪೊಲಿಯೋ ಲಸಿಕೆ ಕಾರ್ಯಕ್ರಮದ ಪೂರ್ವ ಸಿದ್ಧತೆಗಾಗಿ ಕೆ.ಆರ್.ಪುರ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ‘ಬೆಂಗಳೂರು ಪೂರ್ವ ತಾಲ್ಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಪೊಲಿಯೋ ವ್ಯಾಪಿಸಿರುವ ದೇಶಗಳ ಪಟ್ಟಿಯಿಂದ ಭಾರತ 2012ಕ್ಕೆ ಹೊರಬಿದ್ದಿದ್ದು, 2014ಕ್ಕೆ ಪೊಲಿಯೋ ಮುಕ್ತ ರಾಷ್ಟ್ರವೆಂಬ ಪ್ರಮಾಣ ಪತ್ರವನ್ನು ವಿಶ್ವಸಂಸ್ಥೆ ನಮ್ಮ ದೇಶಕ್ಕೆ ನೀಡಿದೆ. ಲಸಿಕೆ ಹಾಕಿಸುವ ಕಾರ್ಯಕ್ರಮಗಳಿಂದ ಪೊಲಿಯೋ ಮರುಕಳಿಸಿಲ್ಲ. ಬೆಂಗಳೂರು ಪೂರ್ವ ತಾಲ್ಲೂಕಿನ ವ್ಯಾಪ್ತಿಯಲ್ಲಿ 3,74,527 ಮನೆಗಳಿದ್ದು, 1,40,263 ಮಕ್ಕಳಿದ್ದಾರೆ. ತಾಲ್ಲೂಕಿನ 441 ಬೂತ್ಗಳಲ್ಲಿ 1,764 ಸಿಬ್ಬಂದಿಗಳು ಲಸಿಕೆ ಹಾಕಲಿದ್ದಾರೆ’ ಎಂದು ವಿವರಿಸಿದರು.
ಪೊಲಿಯೋ ಲಸಿಕೆ ಹಾಕುವ 1ನೇ ಹಂತದ ಕಾರ್ಯಕ್ರಮ ಜನವರಿ 28ರಂದು ನಡೆಯಲಿದೆ. ಮಾರ್ಚ್ 11ಕ್ಕೆ 2ನೇ ಹಂತದ ಕಾರ್ಯಕ್ರಮ ನಡೆಯಲಿದೆ. ತಾಲ್ಲೂಕು ಪಂಚಾಯಿತಿ, ಬಿಬಿಎಂಪಿ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಇದಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.