ADVERTISEMENT

ಎನ್‌ಪಿಎಸ್‌ ನೌಕರರ ಬೇಡಿಕೆ ಪರಿಶೀಲಿಸುವ ಭರವಸೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 19:30 IST
Last Updated 12 ಜನವರಿ 2018, 19:30 IST

ಬೆಂಗಳೂರು: ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್‌) ನೌಕರರ ಸಂಘದ ಬೇಡಿಕೆಗಳ ಬಗ್ಗೆ ಬಜೆಟ್‌ ಮಂಡನೆ ಬಳಿಕ ಸಭೆ ಕರೆದು ಚರ್ಚಿಸುವುದಾಗಿ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್‌ ಭರವಸೆ ನೀಡಿದರು.

ಆರನೇ ವೇತನ ಆಯೋಗದ ವರದಿಯಲ್ಲಿ ಎನ್‌ಪಿಎಸ್‌ ಪದ್ಧತಿ ಬದಲಾವಣೆ ಮಾಡುವಂತೆ ಶಿಫಾರಸು ಮಾಡಬೇಕು ಎಂಬ ಬೇಡಿಕೆ ಕುರಿತು ಚರ್ಚಿಸಲು ಶುಕ್ರವಾರ ಆಯೋಗದ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ರಾಜ್ಯ ಸರ್ಕಾರ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ಹಾಗೂ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ರಮೇಶ ಸಂಗಾ ಅವರು, ರಾಜ್ಯದಲ್ಲಿರುವ 1.80 ಲಕ್ಷ ಎನ್‌ಪಿಎಸ್‌ ನೌಕರರ ಬೇಡಿಕೆಗಳನ್ನು ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಸಾದ್‌, ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಯೋಜನೆಯ ಸಾಧಕ–ಬಾಧಕಗಳ ಜತೆ ಚರ್ಚಿಸಲು ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದು ತಿಳಿಸಿದರು.

ADVERTISEMENT

2004ರಲ್ಲಿ ಎನ್‌ಪಿಎಸ್‌ ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದ ಆರ್ಥಿಕ ತಜ್ಞ ಅಜಯ್ ಷಾ ಯೋಜನೆ ಬಗ್ಗೆ ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.