ADVERTISEMENT

ಆಕ್ಷೇಪಣೆ ಆಧರಿಸಿ 2031ರ ಪರಿಷ್ಕೃತ ಮಹಾ ಯೋಜನೆ ಅಂತಿಮ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 20:33 IST
Last Updated 16 ಜನವರಿ 2018, 20:33 IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಿದ್ಧಪಡಿಸಿರುವ 2031ರ ಪರಿಷ್ಕೃತ ಮಹಾ ಯೋಜನೆಯನ್ನು ಸಾರ್ವಜನಿಕರಿಂದ ಆಹ್ವಾನಿಸಿರುವ ಆಕ್ಷೇಪಣೆಗಳನ್ನು ಆಧರಿಸಿ ಕೆಲವು ಬದಲಾವಣೆಗಳೊಂದಿಗೆ ಅಂತಿಮಗೊಳಿಸಲು ನಿರ್ಧರಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಮಂಗಳವಾರ ನಡೆದ ಬೆಂಗಳೂರು ಮಹಾನಗರ ಯೋಜನಾ ಸಮಿತಿಯ ಸಭೆಯಲ್ಲಿ ಅಂತಿಮ ಮಹಾ ಯೋಜನೆ ಪ್ರಕಟಿಸಲು ಬಿಡಿಎ ಯೋಜನಾ ಸಮಿತಿಗೆ ಸೂಚಿಸಲಾಯಿತು.

ಆದರೆ, ಈ ಸಭೆಯಲ್ಲಿ ಪರಿಷ್ಕೃತ ಮಹಾ ಯೋಜನೆಯ ಕರಡು ಪ್ರತಿಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ಈಗಾಗಲೇ ಸಿದ್ಧಪಡಿಸಿರುವ ಪರಿಷ್ಕೃತ ಕರಡಿನಲ್ಲಿ ಅನೇಕ ಲೋಪದೋಷಗಳಿವೆ. ಅದನ್ನು ತಕ್ಷಣ ವಾಪಸು ಪಡೆದು, ಮರು ಯೋಜನೆ ರೂಪಿಸಬೇಕು ಎಂಬ ಒತ್ತಾಯ ಕೇಳಿಬಂತು.

ADVERTISEMENT

ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಈಗಾಗಲೇ ಪ್ರಕಟಿಸಲಾಗಿರುವ ಕರಡು ಮಹಾಯೋಜನೆ ಕುರಿತಂತೆ ಚರ್ಚಿಸಿದ್ದೇವೆ. ಸಭೆಯಲ್ಲಿ ಕೇಳಿಬಂದಿರುವ ಸಲಹೆ ಗಮನದಲ್ಲಿಟ್ಟು ಬಿಡಿಎ ಸಮಿತಿ ಪರಿಶೀಲನೆ ನಡೆಸಲಿದೆ. ಬಳಿಕ ವಾಸ್ತವಿಕ ಅಂಶ ಪರಿಗಣಿಸಿ, ಮಹಾ ಯೋಜನೆ ಅಂತಿಮಗೊಳಿಸಲಾಗುವುದು’ ಎಂದರು.

‘ಮಹಾ ಯೋಜನೆ ಅಂತಿಮಗೊಳಿಸುವ ಮೊದಲು ಬೆಂಗಳೂರು ಮಹಾನಗರ ಯೋಜನೆ ಸಮಿತಿಯ ಸಲಹೆ ಪಡೆಯಲು ಸಭೆ ನಡೆಸಲಾಯಿತು. ಈಗಾಗಲೇ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, ಇದೇ 23 ಕೊನೆ ದಿನ. 2,600 ಆಕ್ಷೇಪಣೆಗಳು ಬಿಡಿಎಗೆ ಸಲ್ಲಿಕೆಯಾಗಿವೆ. ಅವುಗಳನ್ನು ಪರಿಶೀಲಿಸಿ, ಯೋಜನೆ ಅಂತಿಮಗೊಳಿಸಲಾಗುವುದು’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

‘ಕೊನೆ ದಿನಾಂಕ ವಿಸ್ತರಿಸುವಂತೆ ಕೆಲವರು ಸಲಹೆ ನೀಡಿದ್ದಾರೆ. ಸದ್ಯಕ್ಕೆ ದಿನಾಂಕ ವಿಸ್ತರಣೆ ಅಗತ್ಯ ಕಂಡುಬಂದಿಲ್ಲ. ನಿಗದಿತ ಸಮಯದಲ್ಲೇ ಆಕ್ಷೇಪಣೆ ಪರಿಶೀಲಿಸಿ, ಸೂಕ್ತ ಸಲಹೆ ಪಡೆಯಲಾಗುವುದು’ ಎಂದು ಜಾರ್ಜ್‌ ಸ್ಪಷ್ಟಪಡಿಸಿದರು.

ಬೆಂಗಳೂರು ನಗರದ ಕೆರೆಗಳಿಗೆ ಬಫರ್ ಜೋನ್ ಗುರುತು ಮಾಡಿರುವ ಸಂಬಂಧ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಬೆಂಗಳೂರು ನಗರದ ಕೆರೆಗಳಿಗೆ ಮಾತ್ರ 75 ಮೀಟರ್ ಬಫರ್ ಜೋನ್ ನಿಗದಿ ಮಾಡಿದೆ. ಈ ನಿಟ್ಟಿನಲ್ಲಿ ಕೆರೆಗಳ ವರ್ಗೀಕರಣ ಮಾಡಿ, ಅವುಗಳ ಬಫರ್ ಜೋನ್ ನಿರ್ಧರಿಸುವ ಅಧಿಕಾರ ಸರ್ಕಾರಕ್ಕೆ ಇದೆ. ಹೀಗಾಗಿ ಎನ್‌ಜಿಟಿ ಆದೇಶವನ್ನು ಸುಪ್ರಿಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಮಹಾ ಯೋಜನೆ ರೂಪಿಸಲಾಗಿದೆ ಎಂದು ಅವರು ವಿವರಿಸಿದರು.

ಈ ಸಂಬಂಧ ಅಡ್ವೋಕೇಟ್ ಜನರಲ್‌ರಿಂದ ಸಲಹೆ ಪಡೆಯುವಂತೆ ಕೆಲವರು ಹೇಳಿದ್ದಾರೆ. ಅದನ್ನೂ ಪರಿಶೀಲಿಸಲಾಗುವುದು ಎಂದೂ ಸಚಿವ ಜಾರ್ಜ್ ಹೇಳಿದರು.

ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ, ‘ಮಹಾನಗರ ಯೋಜನೆ ಸಮಿತಿ ಸಭೆಯನ್ನೇ ನಡೆಸದೆ ಕರಡು ಪ್ರಕಟಿಸಲಾಗಿತ್ತು. ಸರ್ಕಾರದ ನಿಲುವಿಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇಂದು ಸಭೆ ನಡೆಸಲಾಗಿದೆ. ಇಡೀ ಸಿಡಿಪಿ ಅತ್ಯಂತ ಅವೈಜ್ಞಾನಿಕವಾಗಿದ್ದು, ವಾಪಸ್ ಪಡೆಯುವಂತೆ ಸಲಹೆ ಮಾಡಿದ್ದೇವೆ. ಕೆಲವು ಜನವಸತಿ ಪ್ರದೇಶಗಳನ್ನು ರಸ್ತೆಗಳು, ಕೆರೆಗಳು ಎಂದು ಸಿಡಿಪಿಯಲ್ಲಿ ಗುರುತಿಸಲಾಗಿದೆ’ ಎಂದು ದೂರಿದರು.

‘ಬೆಂಗಳೂರಿನ ಅನೇಕರಿಗೆ ಈ ಸಿಡಿಪಿಯಿಂದ ತೊಂದರೆ ಆಗಲಿದೆ. ಇನ್ನೂ ಕೆಲವೆಡೆ ಅರಣ್ಯ ಪ್ರದೇಶವನ್ನು ವಾಣಿಜ್ಯ ಪ್ರದೇಶವೆಂದು ಗುರುತಿಸಲಾಗಿದೆ. 1907ರ ನಕಾಶೆ ಪಾಲಿಸಿದ್ದಾಗಿ ಹೇಳುವ ಬಿಡಿಎ, ಮತ್ತೊಂದೆಡೆ ಸ್ಯಾಟಲೈಟ್ ದೃಶ್ಯಗಳನ್ನು ಪರಿಗಣಿಸಿದ್ದಾಗಿ ಹೇಳುತ್ತಿದೆ. ಗೊಂದಲಗಳಿಂದ ಕೂಡಿರುವ ಸಿಡಿಪಿಯನ್ನು ವಾಪಸ್ ಪಡೆದು, ಮತ್ತೊಮ್ಮೆ ಸಿದ್ಧಪಡಿಸಬೇಕು’ ಎಂದು ಆಗ್ರಹಿಸಿದರು.

‘ಜನವಸತಿ, ಜಲಮೂಲಗಳು, ಅರಣ್ಯ, ರಸ್ತೆಗಳು ಹೀಗೆ ಶೇಕಡಾವಾರು ಪ್ರಮಾಣವನ್ನು ಸರಿದೂಗಿಸುವ ಭರದಲ್ಲಿ ಎನ್‌ಜಿಟಿ ನೀಡಿದ ಆದೇಶವನ್ನೇ ಧಿಕ್ಕರಿಸಿ, ಕೆರೆ ಕೋಡಿಗಳನ್ನು ರಸ್ತೆಗಳೆಂದು ದಾಖಲಿಸಿದ ನಿದರ್ಶನಗಳಿವೆ. ಮಹಾ ಯೋಜನೆ ಜಾರಿಗೊಂಡರೆ ಭವಿಷ್ಯದಲ್ಲಿ ಭಾರಿ ತೊಂದರೆ ಆಗಲಿದೆ’ ಎಂದೂ ಅಭಿಪ್ರಾಯಪಟ್ಟರು.

ಸಚಿವರಾದ ಆರ್. ರೋಷನ್ ಬೇಗ್, ಎಚ್.ಎಂ. ರೇವಣ್ಣ, ಮೇಯರ್ ಆರ್. ಸಂಪತ್‌ರಾಜ್, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್, ಬಿಡಿಎ ಆಯುಕ್ತ ರಾಕೇಶ್‌ ಸಿಂಗ್ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.