ಬೆಂಗಳೂರು: ಇತ್ತೀಚೆಗೆ ಮನೆಗಳಲ್ಲಿ ಕಳವು ಹಾಗೂ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ತಡೆಯಲು ಬಡಾವಣೆಯಲ್ಲಿ ಅಲ್ಲಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಕಾವೇರಿ ಬಡಾವಣೆಯ ನಿವಾಸಿಗಳು ಒತ್ತಾಯಿಸಿದರು.
ಸಿ.ವಿ.ರಾಮನ್ ನಗರ ಕ್ಷೇತ್ರದ ಜಿ.ಎಂ.ಪಾಳ್ಯ ವಾರ್ಡ್ನ ಕಾವೇರಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬುಧವಾರ ಏರ್ಪಡಿಸಿದ್ದ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಗೋವಿಂದರಾಜು, ‘ಬಡಾವಣೆಯಲ್ಲಿ ಮೈದಾನವಿಲ್ಲ. ಮಕ್ಕಳು ರಸ್ತೆಗಳಲ್ಲೇ ಆಟವಾಡಬೇಕಾದ ಪರಿಸ್ಥಿತಿ ಇದೆ. ಆಡುವಾಗ ಮಕ್ಕಳು ಅಪಘಾತಕ್ಕೀಡಾಗುವ ಅಪಾಯ ಇದೆ. ಶೀಘ್ರವೇ ಆಟದ ಮೈದಾನದ ನಿರ್ಮಿಸಬೇಕು’ ಎಂದು ಮನವಿ ಮಾಡಿದರು.
ಲೇಔಟ್ ಪಕ್ಕದಲ್ಲಿರುವ ಬೈರಸಂದ್ರದ ಕೆಳಗಿನಕೆರೆಯನ್ನು ಅಭಿವೃದ್ಧಿಗೊಳಿಸಬೇಕು. ಸುತ್ತಲೂ ವಿಹಾರ ಪಥವನ್ನು ನಿರ್ಮಿಸಬೇಕು ಎಂದು ಪತ್ರಿಕಾ ಏಜೆಂಟ್ ರಾಘವಲು ಒತ್ತಾಯಿಸಿದರು.
ನಿಗದಿತ ಸಮಯದಲ್ಲೇ ಮನೆ ಮನೆಯಿಂದ ಕಸ ಸಂಗ್ರಹಿಸಬೇಕು. ವಾಹನಗಳು ಅತಿವೇಗದಲ್ಲಿ ಸಾಗುವುದನ್ನು ತಡೆಯಲು 13ನೇ ಅಡ್ಡರಸ್ತೆಯಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಬೇಕು. ಮಳೆ ನೀರಿನ ಚರಂಡಿಯನ್ನು ಸಿಮೆಂಟ್ ಸ್ಲ್ಯಾಬ್ಗಳಿಂದ ಮುಚ್ಚಬೇಕು. ವಾರ್ಡ್ನ ಪ್ರತಿ ರಸ್ತೆಗಳಿಗೂ ನಾಮಫಲಕಗಳನ್ನು ಅಳವಡಿಸಬೇಕು ಎಂದು ಇಲ್ಲಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮುನಿರಾಜು ಆಗ್ರಹಿಸಿದರು.
ಲೇಔಟ್ ಪಕ್ಕದ 3ನೇ ಹಾಗೂ 6ನೇ ಮುಖ್ಯರಸ್ತೆಗಳು ಹದಗೆಟ್ಟಿವೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ತ್ವರಿತವಾಗಿ ಅವುಗಳನ್ನು ದುರಸ್ತಿಗೊಳಿಸಬೇಕು ಎಂದು ಮೂರ್ತಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.