
ರಾಜರಾಜೇಶ್ವರಿ ನಗರ: ‘ಹಿಂದೂ ಧರ್ಮದ ರಕ್ಷಣೆ ಆಗಬೇಕಾದರೆ ನಮ್ಮ ಸಂಸ್ಕಾರ, ಸಂಸ್ಕೃತಿ, ಗುರು ಪರಂಪರೆ, ಹಿಂದುತ್ವವನ್ನು ಯುವ ಜನಾಂಗಕ್ಕೆ ತಿಳಿಸುವ ಕೆಲಸ ಆಗಬೇಕು’ ಎಂದು ಚಿತ್ರದುರ್ಗದ ಅಖಿಲ ಭಾರತ ಕೃಷ್ಣ ಯಾದವ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಕೃಷ್ಣ ಯಾದವಾನಂದ ಸ್ವಾಮೀಜಿ ಹೇಳಿದರು.
ನಾಗದೇವನಹಳ್ಳಿಯ ಭೂತಪ್ಪ ಸ್ವಾಮಿ ದೇವಸ್ಥಾನದ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಹಿಂದೂ ಸಮಾಜೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ‘ಹಿಂದೂ ಸಮಾಜದಲ್ಲಿರುವ ಎಲ್ಲ ಜನಾಂಗದವರನ್ನು ಸಹೋದರ, ಸಹೋದರಿಯರಂತೆ ಕಾಣುವ ಮೂಲಕ ಬಲಿಷ್ಠ ಹಿಂದೂ ರಾಷ್ಟ್ರ ಕಟ್ಟಬೇಕು’ ಎಂದರು.
ವಕೀಲರಾದ ಸಹನಾ ಕುಂದರ್ ಸೂಡ ಮಾತನಾಡಿ, ‘ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಹಿಂದೂಗಳಾದ ನಾವೆಲ್ಲರೂ ಜಾತಿಯನ್ನು ದೂರವಿಟ್ಟು ಗುರು ಹಿರಿಯರು, ತಂದೆ ತಾಯಿಯನ್ನು ದೇವರಂತೆ ಕಂಡು, ಪೂಜಿಸುವ ಮೂಲಕ ಬಲಿಷ್ಠ ಹಿಂದೂ ಸಂಸ್ಕೃತಿ ಉಳಿಸೋಣ’ ಎಂದು ಕರೆ ನೀಡಿದರು.
ಬಿಜೆಪಿ ಮುಖಂಡ ನಾಗದೇವನಹಳ್ಳಿ ಎನ್.ಸಿ.ಕುಮಾರ್ ಮಾತನಾಡಿ, ‘ಸಮಾಜದ ಏಕತೆ, ಧಾರ್ಮಿಕ ಪರಂಪರೆ, ಸಂಸ್ಕೃತಿ ಉಳಿಯಬೇಕು. ಸಮಾಜದಲ್ಲಿ ಧರ್ಮ ಉಳಿಯಬೇಕಾದರೆ ಹಿಂದೂಗಳಾದ ನಾವೆಲ್ಲರೂ ಮೇಲು ಕೀಳು ಎಂಬ ಭಾವನೆಯನ್ನು ತೊಲಗಿಸಬೇಕು’ ಎಂದರು.
ಭೂತಪ್ಪ ಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಡಿಪೊ ಕೃಷ್ಣಪ್ಪ, ಸಹಕಾರ ಮಹಾಮಂಡಲ ನಿರ್ದೇಶಕ ಸಿ.ಎಂ. ಮಾರೇಗೌಡ, ಬಿಜೆಪಿ ರಾಜ್ಯ ಓಬಿಸಿ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಪ್ರೇಮಾ ನಾಗಯ್ಯ, ಬಿಎಚ್ಇಎಲ್ ರಂಗಪ್ಪ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಅನಿಲ್ ಚಳಗೆರಿ ಮೊದಲಾದವರು ಹಾಜರಿದ್ದರು. ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಪಿ.ಜಿ. ಗಿರೀಶ್ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.