ADVERTISEMENT

ರಸ್ತೆಗುಂಡಿ ಮುಚ್ಚಲು ಎಎಪಿ ಸಹಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 19:47 IST
Last Updated 4 ಡಿಸೆಂಬರ್ 2021, 19:47 IST
ನಗರದಲ್ಲಿ ಶನಿವಾರ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ವಾಹನ ಸವಾರರಿಂದ ಸಹಿ ಪಡೆದರು - -- ಪ್ರಜಾವಾಣಿ ಚಿತ್ರ
ನಗರದಲ್ಲಿ ಶನಿವಾರ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ವಾಹನ ಸವಾರರಿಂದ ಸಹಿ ಪಡೆದರು - -- ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ರಸ್ತೆ ಕಾಮಗಾರಿ ಗಳಲ್ಲಿ ಭ್ರಷ್ಟಾಚಾರ ಮತ್ತು ಎಲ್ಲೆಡೆ ಗುಂಡಿಗಳು ಬಿದ್ದಿರುವುದನ್ನು ಆಮ್‌ ಆದ್ಮಿ ಪಕ್ಷ ಖಂಡಿಸಿದೆ. ಗುಂಡಿಗಳನ್ನು ಮುಚ್ಚಲು ಹತ್ತು ದಿನಗಳ ಸಹಿ ಸಂಗ್ರಹ ಅಭಿಯಾನವನ್ನು ಆರಂಭಿಸಿದೆ.

ಪಕ್ಷದ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಈ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿದರು. ಇದರ ಅಂಗವಾಗಿ ತೆರೆದ ವಾಹನಗಳ ಮೂಲಕ ನಗರದಾದ್ಯಂತ ಜನಜಾಗೃತಿ ನಡೆಸುತ್ತಿದೆ. ಮೊದಲ ದಿನ ವಾಹನಗಳು ಗಾಂಧಿನಗರ, ಮಲ್ಲೇಶ್ವರ, ರಾಜಾಜಿನಗರ, ಚಿಕ್ಕಪೇಟೆ ಮಾರ್ಗದಲ್ಲಿ ಸಾಗಿ ಆರ್ಮುಗಂ ವೃತ್ತ ತಲುಪಿದವು.

ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣ ಸಮೀಪ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಪೃಥ್ವಿ ರೆಡ್ಡಿ, ‘ಸರ್ಕಾರದ ಬೊಕ್ಕಸದಿಂದ ಬರೋಬ್ಬರಿ ₹ 20 ಸಾವಿರ ಕೋಟಿ ಖರ್ಚಾದರೂ ನಗರದ ಎಲ್ಲ ರಸ್ತೆಗಳಲ್ಲಿ ಗುಂಡಿಗಳಿವೆ. ವಾಹನ ಸವಾರರು ಗಾಯಾಳುಗಳಾಗುತ್ತಿದ್ದಾರೆ. ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ. ರಸ್ತೆ ಕಾಮಗಾರಿಗಳಲ್ಲಾದ ಅಕ್ರಮದ ಬಗ್ಗೆ ಮನೆ ಮನೆಯಲ್ಲಿ ಜಾಗೃತಿ ಮೂಡಿಸುತ್ತೇವೆ’ ಎಂದರು.

ADVERTISEMENT

ಪಕ್ಷದ ನಗರ ಘಟಕದ ಅಧ್ಯಕ್ಷ ಮೋಹನ್‌ ದಾಸರಿ, ‘ಗುಂಡಿಗಳಿಗೆ ಕಾರಣರಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ 70ಕ್ಕೂ ಹೆಚ್ಚು ದೂರುಗಳನ್ನು ಪೊಲೀಸ್‌ ಠಾಣೆಯಲ್ಲಿ ದಾಖಲಿಸಿದ್ದೇವೆ’ ಎಂದರು.

ಮುಖಂಡರಾದ ಬಿ.ಟಿ.ನಾಗಣ್ಣ, ಸುರೇಶ್‌ ರಾಥೋಡ್‌, ಜಗದೀಶ್‌ ಚಂದ್ರ, ಉಷಾ ಮೋಹನ್‌, ಪಲ್ಲವಿ ಚಿದಂಬರಂ, ಅಶೋಕ್‌ ಮೃತ್ಯುಂಜಯ, ವಿಜಯ್‌ ಶಾಸ್ತ್ರಿಮಠ, ಜಗದೀಶ್‌ ವಿ. ಸದಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.