ಬೆಂಗಳೂರು: ಸಿಗರೇಟ್ ವಿತರಕರು ಹಾಗೂ ನಕಲಿ ಮಾಸ್ಕ್ ತಯಾರಿಕರಿಂದ ಲಂಚ ಪಡೆದ ಪ್ರಕರಣದ ಪ್ರಮುಖ ಆರೋಪಿ ಸಿಸಿಬಿ ಎಸಿಪಿ ಪ್ರಭುಶಂಕರ್ ಆಪ್ತರಿಬ್ಬರ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಶನಿವಾರ ದಾಳಿ ನಡೆಸಿ, ಕೆಲ ದಾಖಲೆ ವಶಪಡಿಸಿಕೊಂಡಿದ್ದಾರೆ.
ಪ್ರಭುಶಂಕರ್ ಆಪ್ತರಿಗೆ ಸೇರಿದ ಯಲಹಂಕ ಹಾಗೂ ದೇವನಹಳ್ಳಿಯ ಮನೆಗಳ ಮೇಲೆಏಕಕಾಲಕ್ಕೆ ದಾಳಿ ನಡೆಸಿ, ಶೋಧಿಸಲಾಗಿದೆ. ಕಳೆದ ಮೇ 22ರಂದು ಎಸಿಪಿ ಮನೆ, ಕಚೇರಿ ಮೇಲೆ ನಡೆದಿದ್ದ ದಾಳಿ ವೇಳೆ ವಶಪಡಿಸಿಕೊಂಡಿದ್ದ ಡೈರಿಯಲ್ಲಿ ಸಿಕ್ಕ ಸುಳಿವು ಆಧರಿಸಿ ಇಂದಿನ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎಸಿಪಿ ಆಪ್ತರ ಹೆಸರುಗಳನ್ನು ಬಹಿರಂಗಪಡಿಸಲು ಮೂಲಗಳು ನಿರಾಕರಿಸಿವೆ. ಸಿಸಿಬಿ ಆರ್ಥಿಕ ಅಪರಾಧಗಳ ತಡೆ ವಿಭಾಗದಲ್ಲಿದ್ದ ಪ್ರಭುಶಂಕರ್, ಸಿಐಗಳಾದ ಅಜಯ್, ನಿರಂಜನ ಕುಮಾರ್, ಲಾಕ್ಡೌನ್ ಸಮಯದಲ್ಲಿ ಸಿಗರೇಟ್ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲು ಅವಕಾಶ ಕೊಡಲು ಎಂ.ಡಿ. ಆ್ಯಂಡ್ ಸನ್ಸ್ ಮತ್ತು ಮಹಾವೀರ್ ಟ್ರೇಡರ್ಸ್ ಮತ್ತಿತರ ಸಿಗರೇಟ್ ವಿತರಕರಿಂದ
₹ 85 ಲಕ್ಷ ಲಂಚ ಪಡೆದ ಆರೋಪಕ್ಕೆ ಓಳಗಾಗಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ, ಎನ್– 95 ನಕಲಿ ಮಾಸ್ಕ್ ತಯಾರಿಸುವಾಗ ಸಿಕ್ಕಿಬಿದ್ದ ಆರೋಪಿಗೆ ರಕ್ಷಣೆ ನೀಡಲು ₹ 15 ಲಕ್ಷ ಲಂಚ ಪಡೆಯಲಾಗಿದೆ ಎಂದೂ ದೂರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.