ADVERTISEMENT

‘ಐಪಿಎಸ್‌ ಅಧಿಕಾರಿಗಳ ತಿಕ್ಕಾಟಕ್ಕೆ ಆಡಳಿತ ವೈಫಲ್ಯ ಕಾರಣ’

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 20:42 IST
Last Updated 26 ಡಿಸೆಂಬರ್ 2020, 20:42 IST
ರಮೇಶ್ ಬಾಬು
ರಮೇಶ್ ಬಾಬು   

ಬೆಂಗಳೂರು: ‘ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳ ತಿಕ್ಕಾಟಕ್ಕೆ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯವೇ ಕಾರಣವಾಗಿದ್ದು, ಅಡಳಿತ ಯಂತ್ರದ ಕುಸಿತಕ್ಕೆ ಸಾಕ್ಷಿಯಾಗಿದೆ. ನಿವೃತ್ತಿ ಅಂಚಿನಲ್ಲಿರುವ ಮುಖ್ಯ ಕಾರ್ಯದರ್ಶಿ, ಈ ಅಧಿಕಾರಿಗಳ ತಿಕ್ಕಾಟವನ್ನು ನಿರ್ವಹಿಸಲು ವಿಫಲರಾಗಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಹೇಳಿದ್ದಾರೆ.

‘ಭ್ರಷ್ಟಾಚಾರ ಆರೋಪದ ಮೇಲೆ ಐಪಿಎಸ್‌ ಅಧಿಕಾರಿಗಳು ಬಹಿರಂಗವಾಗಿ ಕಾಳಗ ನಡೆಸಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಸೇವಾ ನಿಯಮಗಳನ್ನು ಗಾಳಿಗೆ ತೂರಿ ಈ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರಗಳನ್ನು ಮಾಧ್ಯಮಗಳಿಗೆ ಹಂಚಿದ್ದಾರೆ. ಮುಖ್ಯ ಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ವೈಫಲ್ಯ ಅಧಿಕಾರಿಗಳ ಜಗಳ ಬೀದಿಗೆ ಬರಲು ಕಾರಣವಾಗಿದೆ’ ಎಂದು ಹೇಳಿದ್ದಾರೆ.

‘ಕೋವಿಡ್ ಚಿಕಿತ್ಸೆಯಲ್ಲಿ ದೊಡ್ಡ ಆಸ್ಪತ್ರೆಗಳಲ್ಲಿ ಶೋಷಣೆ ತಪ್ಪಿಸಲು ವಿಫಲವಾಗಿರುವ ಆರೋಗ್ಯ ಸಚಿವ, ಆಸ್ಪತ್ರೆಗಳ ಆಡಳಿತ ಮಂಡಳಿ ಜೊತೆ ರಾಜಿ ಸಂಧಾನ ಮಾಡುತ್ತಿರುವುದು ದಂಧೆಯ ಸಂಕೇತವಲ್ಲವೇ’ ಎಂದು ಪ್ರಶ್ನಿಸಿರುವ ಅವರು, ‘ಬಿಜೆಪಿ ರಾಷ್ಟ್ರೀಯ ಘಟಕ ರಾಷ್ಟ್ರೀಯ ಮಟ್ಟದಲ್ಲಿ ಭ್ರಷ್ಟಾಚಾರದ ವಿಷಯದಲ್ಲಿ ವಿಶ್ವವಿದ್ಯಾಲಯ ತೆರೆಯುವ ಉದ್ದೇಶವಿದ್ದರೆ ಇವರನ್ನೇ ಕುಲಪತಿಯಾಗಿ ನೇಮಿಸಲಿ’ ಎಂದೂ ವ್ಯಂಗ್ಯವಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.