ವಿಧಾನಸೌಧ
ಬೆಂಗಳೂರು: ಕ್ಲಬ್ ಅಧ್ಯಕ್ಷರನ್ನು ನಿಯಮಬಾಹಿರವಾಗಿ ಅಮಾನತು ಮಾಡಿ, ಅವ್ಯವಹಾರ ನಡೆಸಿದ್ದ ದೊಮ್ಮಲೂರು ಕ್ಲಬ್ ಆಡಳಿತ ಮಂಡಳಿಯನ್ನು ವಜಾ ಮಾಡಿ, ಆಡಳಿತಾಧಿಕಾರಿಯನ್ನು ಸರ್ಕಾರ ನೇಮಿಸಿದೆ.
ದೊಮ್ಮಲೂರು 2ನೇ ಹಂತದಲ್ಲಿರುವ ‘ದೊಮ್ಮಲೂರು ಕ್ಲಬ್’ ಆಡಳಿತ ಮಂಡಳಿ ಮೇಲಿನ 28 ಆರೋಪಗಳಲ್ಲಿ ಬಹುತೇಕವು ಸಾಬೀತಾಗಿದ್ದು, ಕ್ಲಬ್ಗೆ ಆಡಳಿತಾಧಿಕಾರಿ ನೇಮಿಸಬೇಕು ಎಂದು ಸಹಕಾರ ಸಂಘಗಳ ನಿಬಂಧಕರು ಪ್ರಸ್ತಾವ ಹಾಗೂ ಜಿಲ್ಲಾ ನೋಂದಣಾಧಿಕಾರಿ ಶಿಫಾರಸು ಮಾಡಿದ್ದರು.
ಕಾರ್ಯಕಾರಿ ಸಮಿತಿ ಸಭೆಗಳನ್ನು ಕರೆದಿಲ್ಲ, ಬಿಯರ್ ಪೂರೈಕೆಯಲ್ಲಿ ನಷ್ಟ, ಬಾರ್ ಅಧ್ಯಕ್ಷರಿಗೆ ಹಣ ಪಾವತಿ, ಲೆಕ್ಕಪತ್ರಗಳನ್ನು ಕಾರ್ಯಕಾರಿ ಸಮಿತಿಗೆ ನೀಡದಿರುವುದು, ಅಧ್ಯಕ್ಷ ಮತ್ತು ಕಾರ್ಯದರ್ಶಿ ನಡುವೆ ಸಮನ್ವಯ ಕೊರತೆ, ಆಡಳಿತ ಮಂಡಳಿಯಿಂದ ಹಣ ದುರುಪಯೋಗ, ನಿಯಮಬಾಹಿರವಾಗಿ ಸದಸ್ಯರ ಅಮಾನತು, ವಾರ್ಷಿಕ ಸಭೆ ನಡೆಸದಿರುವುದು, ಏಪ್ರಿಲ್ 30ಕ್ಕೇ ಆಡಳಿತ ಮಂಡಳಿ ಅವಧಿ ಮುಕ್ತಾಯಗೊಂಡಿದ್ದರೂ, ಮೇ 8ರಂದು ಸಭೆ ನಡೆಸಿ ಚುನಾವಣೆ ನಿಗದಿಪಡಿಸಿರುವುದು ನಿಯಮಬಾಹಿರವಾಗಿದ್ದು, ಈಗಿನ ಆಡಳಿತ ಮಂಡಳಿಯನ್ನು ವಜಾಗೊಳಿಸಿ, ಆಡಳಿತಾಧಿಕಾರಿ ನೇಮಿಸಿ ಸಹಕಾರ ಇಲಾಖೆ ಮೇ 21ರಂದು ಆದೇಶ ಹೊರಡಿಸಿದೆ.
ಸಹಕಾರ ಸಂಘಗಳ ಉಪ ನಿಬಂಧಕ ಬಿ.ವಿ. ಗಂಗಾಧರ ಅವರನ್ನು ದೊಮ್ಮಲೂರು ಕ್ಲಬ್ಗೆ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಆಡಳಿತಾಧಿಕಾರಿ ಕೂಡಲೇ ಕ್ಲಬ್ ಅಧಿಕಾರ ವಹಿಸಿಕೊಂಡು, ಅಲ್ಲಿನ ನ್ಯೂನತೆಗಳನ್ನು ಸರಿಪಡಿಸಿ, ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಆ ಚುನಾಯಿತ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.