ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಗಾಳಿಯ ಗುಣಮಟ್ಟ ಸೂಚ್ಯಂಕವನ್ನು (ಎಕ್ಯೂಐ) ದೂರವಾಣಿ ಸಂಖ್ಯೆಗೆ ರವಾನಿಸುವ ವ್ಯವಸ್ಥೆ ರೂಪಿಸಿದೆ.
ಸರ್ಕಾರಿ ಅಧಿಕಾರಿಗಳು ಹಾಗೂ ಮಾಧ್ಯಮದವರಿಗೆ ಪ್ರಾಯೋಗಿಕವಾಗಿ ಬುಧವಾರದಿಂದ ನಗರದ ಎಕ್ಯೂಐ ಮಾಹಿತಿ ಒಳಗೊಂಡ ಸಂದೇಶ ಕಳುಹಿಸಲಾಗುತ್ತಿದೆ. 24 ಗಂಟೆಗಳ ಅವಧಿಯಲ್ಲಿ ವರದಿಯಾದ ಸರಾಸರಿ ಗಾಳಿಯ ಗುಣಮಟ್ಟದ ಸೂಚ್ಯಂಕವನ್ನು ಪ್ರದೇಶವಾರು ನೀಡಲಾಗುತ್ತಿದೆ. ಐಕ್ಯೂಐ ಯಾವ ಸ್ಥಿತಿಯಲ್ಲಿದೆ ಎನ್ನುವುದರ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. ಈ ಸೇವೆಯನ್ನು ಮುಂದಿನ ದಿನಗಳಲ್ಲಿ ವಿಸ್ತರಿಸಲು ಮಂಡಳಿಯು ನಿರ್ಧರಿಸಿದೆ.
‘ನೈಜ ಸಮಯದಲ್ಲಿ ಎಕ್ಯೂಐ ಪರಿಶೀಲಿಸಲು ನಗರದ 7 ಕಡೆ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಅದರ ಮೂಲಕ ಐಕ್ಯೂಐ ಮಾಹಿತಿ ಪಡೆದು, ದೂರವಾಣಿ ಸಂಖ್ಯೆಗೆ ಕಳುಹಿಸಲಾಗುತ್ತಿದೆ. ಹೆಬ್ಬಾಳ, ಜಯನಗರ, ನಿಮ್ಹಾನ್ಸ್, ಸೆಂಟ್ರಲ್ ಸಿಲ್ಕ್ ಬೋರ್ಡ್, ನಗರ ರೈಲು ನಿಲ್ದಾಣ, ಬಸವೇಶ್ವರನಗರ, ಬಾಪುಜಿನಗರ,ಕಾಡುಬಿಸನಹಳ್ಳಿ, ಪೀಣ್ಯ ಹಾಗೂ ಬಿಟಿಎಂ ಬಡಾವಣೆಯ ಸುತ್ತಮುತ್ತಲಿನ ಪ್ರದೇಶದಲ್ಲಿನ ಗಾಳಿಯ ಗುಣಮಟ್ಟದ ಸೂಚ್ಯಂಕ ತಿಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆಕಾಶವಾಣಿಯಲ್ಲಿ ಹವಾಮಾನ ವರದಿ ನೀಡಿದಂತೆ ಈ ಮಾಹಿತಿಯನ್ನೂ ಒದಗಿಸಲಾಗುವುದು’ ಎಂದು ಮಂಡಳಿಯ ಪರಿಸರ ಅಧಿಕಾರಿ ಶ್ರೀಧರ್ ನಾಯ್ಕ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.