ADVERTISEMENT

ಕೆಐಎ ಶೌಚಾಲಯದ ದುಸ್ಥಿತಿ ತೆರೆದಿಟ್ಟ ಟ್ವೀಟ್

ನಿರುಪಮಾ ರಾವ್‌ ದೂರಿನಿಂದ ಎಚ್ಚೆತ್ತ ಆಡಳಿತ ಮಂಡಳಿ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 20:00 IST
Last Updated 25 ಆಗಸ್ಟ್ 2019, 20:00 IST
   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ (ಕೆಐಎ) ವಿಶ್ರಾಂತಿ ಕೊಠಡಿಯ ಶೌಚಾಲಯ ದುರ್ನಾತ ಬೀರುತ್ತಿದ್ದ ಬಗ್ಗೆ ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಟ್ವೀಟ್‌ ಮಾಡಿದ್ದು, ಅದರಿಂದ ಎಚ್ಚೆತ್ತ ಆಡಳಿತ ಮಂಡಳಿ ಶೌಚಾಲಯವನ್ನು ಸ್ವಚ್ಛಗೊಳಿಸಿದೆ.

ವಿಮಾನ ನಿಲ್ದಾಣದ ಶೌಚಾಲಯಕ್ಕೆನಿರುಪಮಾ ರಾವ್ ಇತ್ತೀಚೆಗೆ ಹೋಗಿದ್ದರು. ಅಲ್ಲಿಯ ದುಸ್ಥಿತಿಯ ಫೋಟೊವನ್ನು ಕ್ಲಿಕ್ಕಿಸಿಕೊಂಡಿದ್ದ ಅವರು, ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.

‘ಆಡಳಿತ ಮಂಡಳಿಯವರೇ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಶೌಚಾಲಯದ ದುಸ್ಥಿತಿಯನ್ನು ಒಮ್ಮೆ ನೋಡಿ. ದುರ್ನಾತ ಹಾಗೂ ಗಲೀಜು ಆಗಿದೆ. ಎಲ್ಲಿದೆ ನಿಮ್ಮ ಸ್ವಚ್ಛ ಭಾರತ?’ ಎಂದು ಪ್ರಶ್ನಿಸಿದ್ದರು. ಅದನ್ನು ನಿಲ್ದಾಣದ ಸಿಇಒ ಹರಿ ಮರಾರ್ ಅವರ ಖಾತೆಗೂ ಟ್ಯಾಗ್ ಮಾಡಿದ್ದರು.

ADVERTISEMENT

ಮರು ಟ್ವೀಟ್‌ ಮಾಡಿದ್ದ ಸಾರ್ವಜನಿಕರು, ‘ನಿಲ್ದಾಣದ ಶೌಚಾಲಯಗಳನ್ನು ಆಡಳಿತ ಮಂಡಳಿಯು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ’ ಎಂದು ದೂರಿದ್ದರು. ಶೌಚಾಲಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿತ್ತು.

ಅದರಿಂದ ಎಚ್ಚೆತ್ತ ಆಡಳಿತ ಮಂಡಳಿ, ಸಿಬ್ಬಂದಿ ಮೂಲಕ ಶೌಚಾಲಯವನ್ನು ಸ್ವಚ್ಛಗೊಳಿಸಿದೆ. ಅದರ ಫೋಟೊ ಸಮೇತ ಟ್ವೀಟ್ ಮಾಡಿರುವ ಆಡಳಿತ ಮಂಡಳಿ, ‘ನಿರುಪಮಾ ರಾವ್ ಅವರೇ, ನಮ್ಮ ಗಮನಕ್ಕೆ ಸಮಸ್ಯೆ ತಂದಿದ್ದಕ್ಕೆ ಧನ್ಯವಾದಗಳು. ನಿಮಗಾದ ತೊಂದರೆಗೆ ಕ್ಷಮೆ ಕೋರುತ್ತೇವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಸಮಸ್ಯೆ ಸರಿಪಡಿಸಿದ್ದೇವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.