ADVERTISEMENT

ಆಂಬುಲೆನ್ಸ್ ಸೇವೆ: ಲೋಪ ಸರಿಪಡಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 19:33 IST
Last Updated 6 ನವೆಂಬರ್ 2020, 19:33 IST
   

ಬೆಂಗಳೂರು: ‘ಆರೋಗ್ಯ ಕವಚ 108’ ಆಂಬುಲೆನ್ಸ್‌ ಸೇವೆಗೆ ಸರ್ಕಾರವು ಪ್ರತಿವರ್ಷ ದೊಡ್ಡ ಮೊತ್ತದಲ್ಲಿ ಹಣ ಬಿಡುಗಡೆ ಮಾಡುತ್ತದೆ. ಆದರೆ, ಅದಕ್ಕೆ ತಕ್ಕಂತೆ ಗುಣಮಟ್ಟದ ಸೇವೆ ಲಭ್ಯವಾಗುತ್ತಿಲ್ಲ. ಆದ್ದರಿಂದ ಹೊಸದಾಗಿ ಟೆಂಡರ್ ನೀಡುವಾಗ ಲೋಪಗಳನ್ನು ಸರಿಪಡಿಸುವ ಜತೆಗೆ ಜಾಗತಿಕ ಮಟ್ಟ ದಲ್ಲಿ ಸೇವೆ ನೀಡುವ ಸಂಸ್ಥೆ ಅಥವಾ ಕಂಪನಿಗಳ ಒಕ್ಕೂಟಕ್ಕೆ ಗುತ್ತಿಗೆ ನೀಡಬೇಕು’ ಎಂದು
ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸೂಚಿಸಿದರು.

ಇಲಾಖೆಯ ಅಧಿಕಾರಿಗಳು ಹಾಗೂ ಐಟಿ ಕಂಪನಿಗಳ ಮುಖ್ಯಸ್ಥರ ಜತೆಗೆ ಶುಕ್ರವಾರ ಸಭೆ ನಡೆಸಿದ ಅವರು, ‘ತುರ್ತು ಆರೋಗ್ಯ ಸೇವೆ ನೀಡುವ ಆಂಬುಲೆನ್ಸ್‌ಗಳ ಸೇವೆ ಮಹತ್ವ ದ್ದಾಗಿದೆ. ಸದ್ಯ ನಮ್ಮಲ್ಲಿರುವ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪಗಳಿದ್ದು, ಅವುಗಳನ್ನು ನಿವಾರಿಸಬೇಕಿದೆ. ಆಧುನಿಕ ತಂತ್ರಜ್ಞಾನ ಮತ್ತು ಜಾಗತಿಕ ಗುಣಮಟ್ಟದ ನಿರ್ವಹಣಾ ಪದ್ಧತಿ ಅಳವಡಿಸಿಕೊಳ್ಳಬೇಕಿದೆ. ಒಂದು ಲಕ್ಷ ಜನಸಂಖ್ಯೆಯನ್ನು ಮಾನದಂಡವಾಗಿ ಇಟ್ಟುಕೊಳ್ಳುವ ಬದಲಿಗೆ, ಭೌಗೋಳಿಕ ಸವಾಲು ಮತ್ತು ಸಮಸ್ಯೆಗಳನ್ನು ಗಮನದಲ್ಲಿಟ್ಟು
ಕೊಂಡು ಕರಾರು ವಿಧಿಸಬೇಕು. ದೂರವಾಣಿ ಕರೆ ಮತ್ತು ಸಂದೇಶ ಬಂದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿ, ರೋಗಿಯನ್ನು ಕರೆದೊಯ್ಯುವಂತಾಗಬೇಕು’ ಎಂದರು.

‘ಆಂಬುಲೆನ್ಸ್ ನಿಗದಿ ಆಗುವ ಮೊದಲು ಕಾಲ್ ಸೆಂಟರ್‌ನಲ್ಲಿ ಕರೆ ಸ್ವೀಕರಿಸಿ, ಸಮೀಪದಲ್ಲಿ ಇರುವ ಆಂಬುಲೆನ್ಸ್‌ ಅನ್ನು ಕಳುಹಿಸಬೇಕು. ಪ್ರಾಥಮಿಕ ಚಿಕಿತ್ಸೆ ನೀಡಲು ತರಬೇತಿ ಹೊಂದಿದ ಸಿಬ್ಬಂದಿ ಇರಬೇಕು. ಉಬರ್ ಮತ್ತು ಓಲಾ ಮಾದರಿಯ ಆ್ಯಪ್ ವ್ಯವಸ್ಥೆ ರೂಪಿಸಬೇಕು. ಹಿಂದೆ ಜಿವಿಕೆ ಸಂಸ್ಥೆಗೆ ಗುತ್ತಿಗೆ ನೀಡಿದಾಗ ಮಾರುಕಟ್ಟೆಯಲ್ಲಿ ಸ್ಪರ್ಧೆ ಇರಲಿಲ್ಲ. ಈಗ ಅನೇಕ ಸಂಸ್ಥೆಗಳು ಸೇವೆ ನೀಡಲು ಮುಂದಾಗಿವೆ. ಗುತ್ತಿಗೆ ಅವಧಿ ಮೂರು ವರ್ಷ ಇದ್ದರೆ ಸೇವೆ ನೀಡುವವರಿಗೂ ಹೊಣೆಗಾರಿಕೆ ಇರುತ್ತದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.