ಬೆಂಗಳೂರು: ಬಕ್ರೀದ್ ಆಚರಣೆ ವೇಳೆ ಪ್ರಾಣಿಗಳ ಅಕ್ರಮ ಸಾಗಣೆ ಹಾಗೂ ವಧೆ ತಡೆ ಸಂಬಂಧ ನಗರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಬುಧವಾರ ಸಭೆ ನಡೆಸಿದರು.
ಒಂಟೆ ಹಾಗೂ ಜಾನುವಾರುಗಳ ಅಕ್ರಮ ಸಾಗಣೆ, ವಧೆ ತಡೆ ಕುರಿತಂತೆ ಸಾರ್ವಜನಿಕರಿಂದ ಬಂದ ದೂರುಗಳ ಬಗ್ಗೆ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ವಿವರಿಸಿದರು.
ಅಧಿಕಾರಿಗಳ ನೇತೃತ್ವದಲ್ಲಿ ಕಣ್ಗಾವಲು ತಂಡ ರಚಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಈ ಬಾರಿ ರಾತ್ರಿ ಕೂಡ ಪಹರೆ ನಡೆಯಲಿದ್ದು, ಜಿಲ್ಲೆಯ ಗಡಿಭಾಗಗಳಲ್ಲಿ ಪಹರೆಗೆ ಸಿಬ್ಬಂದಿ ನಿಯೋಜಿಸಲು ತೀರ್ಮಾನಿಸಲಾಯಿತು.
ಎಂಟು ವಲಯಗಳಲ್ಲಿ ಒಟ್ಟು ಹತ್ತು ತಂಡಗಳು ಕಾರ್ಯನಿರ್ವಹಿಸಲಿದೆ. ಪೂರ್ವ ವಲಯಕ್ಕೆ (ಶಿವಾಜಿನಗರ, ಶಾಂತಿನಗರ, ಮಾರತ್ತಹಳ್ಳಿ, ಹೆಬ್ಬಾಳ) ಮೂರು ತಂಡಗಳು ಹಾಗೂ ಉಳಿದೆಡೆ ವಲಯಕ್ಕೆ ತಲಾ ಒಂದು ತಂಡವನ್ನು ನಿಯೋಜಿಸಲಾಗಿದೆ. ತಂಡದಲ್ಲಿಸಬ್ ಇನ್ಸ್ಪೆಕ್ಟರ್, ಪಶುಸಂಗೋಪನೆ, ಆರೋಗ್ಯ, ಬಿಬಿಎಂಪಿ, ಕಂದಾಯ ಹಾಗೂ ಸಾರಿಗೆ ಇಲಾಖೆಯ ತಲಾ ಒಬ್ಬ ಅಧಿಕಾರಿ ಇರುತ್ತಾರೆ.ಎರಡು ಪಾಳಿಗಳಲ್ಲಿ ಗಸ್ತು ತಿರುಗಲಿದ್ದಾರೆ.
ಸಾರ್ವಜನಿಕರು ಈ ಸಂಬಂಧ ಬಿಬಿಎಂಪಿ ನಿಯಂತ್ರಣ ಕೊಠಡಿ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.