ADVERTISEMENT

ಬೆಂಗಳೂರು: ಸೆ.23ರಿಂದ ಅನುಭವ ಮಂಟಪ ಸಮಾವೇಶ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2023, 15:34 IST
Last Updated 22 ಸೆಪ್ಟೆಂಬರ್ 2023, 15:34 IST
<div class="paragraphs"><p>ಎಸ್‌.ಆರ್. ಹಿರೇಮಠ್</p></div>

ಎಸ್‌.ಆರ್. ಹಿರೇಮಠ್

   

ಬೆಂಗಳೂರು: ಜನಾಂದೋಲನಗಳ ಮಹಾಮೈತ್ರಿ (ಜೆಎಂಎಂ), ಸಿಟಿಜನ್ಸ್ ಫಾರ್ ಡೆಮಾಕ್ರಸಿ (ಸಿಎಫ್‌ಡಿ) ಹಾಗೂ ಮಹಾರಾಷ್ಟ್ರದ ಕೆಲವು ಪ್ರಗತಿಪರ ಸಂಘಟನೆಗಳು ಜಂಟಿಯಾಗಿ ನಗರದ ಗಾಂಧಿಭವನದಲ್ಲಿ ಇದೇ ಶನಿವಾರ ಹಾಗೂ ಭಾನುವಾರ ‘ಅಖಿಲ ಭಾರತ ಅನುಭವ ಮಂಟಪ ಸಮಾವೇಶ’ ಆಯೋಜಿಸಿವೆ. 

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಫ್‌ಡಿ ಅಧ್ಯಕ್ಷ ಎಸ್‌.ಆರ್. ಹಿರೇಮಠ್, ‘ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು, ಕೋಮು ಸಾಮರಸ್ಯ, ದ್ವೇಷ ರಾಜಕೀಯ ಹಾಗೂ ಕೇಂದ್ರದ ಜನವಿರೋಧಿ ನೀತಿಗಳನ್ನು ವಿರೋಧಿಸುವ ಉದ್ದೇಶಗಳೊಂದಿಗೆ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ‌ಎರಡು ದಿನಗಳ ಈ ಸಮಾವೇಶವನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ದಾಸ್‌ ಉದ್ಘಾಟಿಸಲಿದ್ದಾರೆ. ಚಿಂತಕ ರಾಜೇಂದ್ರ ಚೆನ್ನಿ ಆಶಯ ಭಾಷಣ ಮಾಡಲಿದ್ದಾರೆ. ಮಹಾರಾಷ್ಟ್ರದ ನಾಗಪುರದ ದಲಿತ ಮಾನವ ಹಕ್ಕುಗಳ ರಾಷ್ಟ್ರೀಯ ಆಂದೋಲನದ ಸಂಸ್ಥಾಪಕ ವಿಮಲ್ ತೋರಟ್‌ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ಹೇಳಿದರು. 

ADVERTISEMENT

‘ಪ್ರತಿಗಾಮಿ ಸಾಂಸ್ಕೃತಿಕ ರಾಜಕಾರಣಕ್ಕೆ ಜನಸಾಂಸ್ಕೃತಿಕ ಪ್ರತಿರೋಧ ಸಾಧ್ಯತೆಗಳ ಹುಡುಕಾಟ, ನಿಸರ್ಗ ಮತ್ತು ಸುಸ್ಥಿರ ಅಭಿವೃದ್ಧಿ, ರಾಜಕಾರಣ ಜನತಾಂತ್ರೀಕರಣ, ಸಂವಿಧಾನ, ಒಕ್ಕೂಟ ವ್ಯವಸ್ಥೆ, ಚುನಾವಣಾ ಸುಧಾರಣೆಗಳು, 2024ರ ಲೋಕಸಭೆ ಚುನಾವಣೆಯಲ್ಲಿ ನಾಗರಿಕ ಸಮಾಜದ ಪಾತ್ರ ಸೇರಿ ವಿವಿಧ ವಿಷಯಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ. ಸೆ. 25ರಂದು ಸಾಂಸ್ಕೃತಿಕ ಆಂದೋಲನದ ಕಾರ್ಯಯೋಜನೆ ಸಿದ್ಧಪಡಿಸುವ ಕುರಿತು ಸಮಾಲೋಚನ ಸಭೆಯನ್ನೂ ಏರ್ಪಡಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.