ಬೆಂಗಳೂರು: ಕರ್ನಾಟಕದ 12ನೇ ಶತಮಾನದ ಶರಣರ ವಚನ ಸಾಹಿತ್ಯ ಯಾವ ಪಾಶ್ಚಿಮಾತ್ಯ ಸಾಹಿತ್ಯಕ್ಕೂ ಕಡಿಮೆ ಇಲ್ಲ. ಈ ಕುರಿತು ಇನ್ನಷ್ಟು ತೌಲನಿಕ ಅಧ್ಯಯನದ ಅಗತ್ಯವಿದೆ ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಎಂದು ಹೇಳಿದರು.
ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಾಗತಿಕ ಭಾಷೆಗಳ ಕೇಂದ್ರದ ಸಂಸ್ಥಾಪಕ ಅಧ್ಯಕ್ಷೆ ಸುಮನ್ ವೆಂಕಟೇಶ್ ಅವರ ‘ವಿಕ್ಟರ್ ಹ್ಯೂಗೋ ಮತ್ತು ಹಿಂದು ಫಿಲಾಸಪಿ’ ಕೃತಿ ಬಿಡುಗಡೆ ಮಾಡಿ ಜತ್ತಿ ಅವರು
ಮಾತನಾಡಿದರು.
ಬಸವಣ್ಣನವರ 400 ವಚನಗಳು ಅಧ್ಯಾತ್ಮದ, ಅನುಭವದ ಕಣಜಗಳಾಗಿವೆ. ಅಲ್ಲಮ ಪ್ರಭುಗಳು ಬಯಲನ್ನೇ ಮುಕ್ತಿಯ ಮಾರ್ಗ ಎಂದು ಪ್ರತಿಪಾದಿಸಿದ್ದಾರೆ. ಪರಮಾತ್ಮನನ್ನು ಜಗದಗಲ, ಮುಗಿಲಗಲ ಎನ್ನುವ ಮೂಲಕ ದೇವರ ಆಳ, ಅಗಲ ಅಳೆಯಲು ಸಾಧ್ಯವಿಲ್ಲ. ಬದುಕೇ ಬಯಲು ಎಂದು ಪ್ರತಿಪಾದಿಸಿದ್ದಾರೆ. ನುಡಿದಂತೆ ನಡೆಯುವುದಕ್ಕೆ ನಡೆದಂತೆ ನುಡಿಯುವುದಕ್ಕೆ ಒತ್ತು ನೀಡಿದ್ದಾರೆ. ಆಡಂಬರವಿಲ್ಲದ ದೈವ ನಂಬಿದ
ಅಕ್ಕಮಹಾದೇವಿಯಂತಹವರನ್ನು ವಿಶ್ವದ ಎಲ್ಲೂ ಕಾಣಲು ಸಾಧ್ಯವಿಲ್ಲ. ಈ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ಎಂದು
ಹೇಳಿದರು.
ಕುಲಪತಿ ಲಿಂಗರಾಜ ಗಾಂಧಿ ಅಧ್ಯಕ್ಷತೆ ವಹಿಸಿದ್ದರು. ಅಲಯನ್ಸ್ ಫ್ರಾಂಚೈಸ್ ನಿರ್ದೇಶಕ ಜೆ.ರಾ. ಕ್ರಿಶ್ಚಿಯನ್, ಶಾಸ್ತ್ರೀಯ ನೃತ್ಯಗಾರ್ತಿ ಲಕ್ಷ್ಮಿ ಗೋಪಾಲಸ್ವಾಮಿ, ಲೇಖಕಿ ಸುಮನ್ ವೆಂಕಟೇಶ್,ಜಾಗತಿಕ ಭಾಷೆಗಳ ಕೇಂದ್ರದ ಅಧ್ಯಕ್ಷೆ ಜ್ಯೋತಿ ವೆಂಕಟೇಶ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.