ADVERTISEMENT

ಚಿನ್ನಾಭರಣ ಕಳವು: ಪ್ರಕರಣ ದಾಖಲಾದ ಎರಡು ತಾಸಿನಲ್ಲೇ ಬಂಧನ

ನೇಪಾಳದ ದಂಪತಿ ಸೇರಿ ಐವರಿಂದ ಕೃತ್ಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 5:52 IST
Last Updated 16 ಫೆಬ್ರುವರಿ 2023, 5:52 IST
   

ಬೆಂಗಳೂರು: ಮನೆಕೆಲಸಕ್ಕೆ ಸೇರಿ ಕೊಂಡು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ವಿವಿಧ ಬ್ರ್ಯಾಂಡ್‌ನ ವಾಚ್‌ಗಳನ್ನು ಕಳವು ಮಾಡಿದ್ದ ನೇಪಾಳದ ದಂಪತಿ ಸೇರಿ ಐವರು ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

ನೇಪಾಳದ ದೈಲೇಕ್‌ ಗ್ರಾಮದ ಬಿಕಾಸ್‌ (23) ಹಾಗೂ ಆತನ ಪತ್ನಿ ಸುಷ್ಮಿತಾ (22), ಹೇಮಂತ್‌ ಬಿನ್‌ ಹಿರದಮ್‌ (21), ರೋಷನ್‌ (27), ಪ್ರೇಮ್‌ (31) ಬಂಧಿತರು. ಜಯನಗರದ 5ನೇ ಬ್ಲಾಕ್‌ನ 5ನೇ ಮುಖ್ಯರಸ್ತೆಯಲ್ಲಿ ದಂಪತಿ ನೆಲೆಸಿದ್ದರು. ಪ್ರಕರಣ ದಾಖಲಾದ ಎರಡು ತಾಸಿನಲ್ಲೇ ಕಳವು ಮಾಡಿದ್ದ ದಂಪತಿಯನ್ನು ಬಂಧಿಸಲಾಯಿತು. ಅದಾದ ಮೇಲೆ ಕಳವು ಪ್ರಕರಣಕ್ಕೆ ನೆರವಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಯಿತು ಎಂದು ಮೂಲಗಳು ತಿಳಿಸಿವೆ.

‘ಜಯನಗರದ ಎಚ್‌.ಎಸ್‌.ಒಬೇದುಲ್ಲಾ ಖಾನ್‌ ಅವರು ಮನೆಯಲ್ಲಿ ಕೆಲಸಕ್ಕೆಂದು ಇಬ್ಬರೂ ಸೇರಿಕೊಂಡಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ನಗ–ನಾಣ್ಯ ಕಳವು ಮಾಡಿ ಪರಾರಿಯಾಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಬಂಧಿತ ದಂಪತಿಯಿಂದ ₹ 19.27 ಲಕ್ಷ ಮೌಲ್ಯದ 252 ಗ್ರಾಂ ಚಿನ್ನಾಭರಣ, 168 ಗ್ರಾಂ ಬೆಳ್ಳಿಯ ಆಭರಣ, ರಾಡೊ, ಅರಮಾನಿ, ಫಾಸಿಲ್‌ ಸೇರಿದಂತೆ ವಿವಿಧ ಬ್ರ್ಯಾಂಡ್‌ನ 18 ವಾಚ್‌ಗಳು, 1 ಸ್ಯಾಮ್‌ ಸಂಗ್‌ ಟ್ಯಾಬ್‌, 1 ಮೊಬೈಲ್‌ ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ ₹ 21.27 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಜಯನಗರದ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.