ಬೆಂಗಳೂರು: ತಮ್ಮ ವಿರುದ್ಧ ಶಿಕ್ಷಕರಿಗೆ ದೂರು ನೀಡಿದ್ದರಿಂದ ಕೆರಳಿದ ವಿದ್ಯಾರ್ಥಿಗಳ ಗುಂಪೊಂದು ಸಹಪಾಠಿಯ ಮೇಲೆ ಹಲ್ಲೆ ನಡೆಸಿದ್ದು, ಈ ಸಂಬಂಧ ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಸಿ.ಸಾತ್ವಿಕ್ ಹಲ್ಲೆಗೊಳಗಾದ ವಿದ್ಯಾರ್ಥಿ. ಆತ ನೀಡಿರುವ ಲಿಖಿತ ದೂರಿನ ಆಧಾರದಲ್ಲಿ ತೇಜಸ್ ಆರ್.ಕೃಷ್ಣ, ಮನೋಜ್, ತುಷಾರ್ ಶಂಕರ್, ರೀಜಾ ಜೋಸೆಫ್, ಎಂ.ಡಿ.ಸುಜಿತ್ ರಾಜ್, ಅಖಿಲೇಶ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಕಾನೂನು ವ್ಯಾಸಂಗ ಮಾಡುತ್ತಿರುವ ಸಾತ್ವಿಕ್, ತರಗತಿಯ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದ. ತೇಜಸ್ ಹಾಗೂ ಇತರರು ಸರಿಯಾಗಿ ತರಗತಿಗಳಿಗೆ ಹಾಜರಾಗದಿರುವ ಬಗ್ಗೆ ಶಿಕ್ಷಕರಿಗೆ ದೂರು ನೀಡಿದ್ದ. ಇದರಿಂದ ತೇಜಸ್ ಹಾಗೂ ಆತನ ಸ್ನೇಹಿತರು ಕೆರಳಿದ್ದರು. ಜೊತೆಯಲ್ಲೇ ಊಟ ಮಾಡುವ ನೆಪದಲ್ಲಿ ಸಾತ್ವಿಕ್ನನ್ನು ಆಗಸ್ಟ್ 26ರ ಮಧ್ಯಾಹ್ನ ನೆಟ್ಟಕಲ್ಲಪ್ಪ ವೃತ್ತಕ್ಕೆ ಕರೆಸಿಕೊಂಡಿದ್ದರು. ಅಲ್ಲಿ ಆತನನ್ನು ಹಿಡಿದು ಥಳಿಸಿದ್ದರು. ಈ ಬಗ್ಗೆ ಯಾರಿಗಾದರೂ ದೂರು ನೀಡಿದರೆ ಮತ್ತೆ ಹಲ್ಲೆ ಮಾಡುವುದಾಗಿಯೂ ಬೆದರಿಸಿದ್ದರು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.