ಬೆಂಗಳೂರು: ‘ಭಾರತ ಕಬಡ್ಡಿ ತಂಡದ ಮಾಜಿ ಆಟಗಾರ ಬಿ.ಸಿ. ರಮೇಶ್ ಸೇರಿ ಮೂವರು ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿ ಮಾಜಿ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಉಷಾರಾಣಿ ಅವರು ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೊಲೀಸ್ ಸಿಬ್ಬಂದಿಯೂ ಆಗಿರುವ ಉಷಾ ರಾಣಿ ಅವರು ಪ್ರೊ. ಕಬಡ್ಡಿ ಲೀಗ್ನ ಬೆಂಗಾಲ್ ವಾರಿಯರ್ಸ್ ತಂಡದ ಮುಖ್ಯ ತರಬೇತು
ದಾರ ಬಿ.ಸಿ. ರಮೇಶ್, ರಾಜ್ಯ ಅಸೋಸಿಯೇಷನ್ನ ಕಾರ್ಯದರ್ಶಿ ಮುನಿರಾಜು, ತರಬೇತುದಾರ ನರಸಿಂಹ ಹಾಗೂ ಷಣ್ಮುಗಂ ಎಂವವರ ವಿರುದ್ಧ ಮಂಗಳವಾರ ರಾತ್ರಿ ದೂರು ನೀಡಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ಕಿರಿಯರ ಕಬಡ್ಡಿ ಶಿಬಿರ ನಡೆಯುತ್ತಿದೆ. ಶಿಬಿರಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ಅತಿಥಿಯಾಗಿ ಬಂದಿದ್ದರು. ಈ ಅತಿಥಿಯನ್ನು ಕಬಡ್ಡಿ ಆಟಗಾರ್ತಿಯರಿಗೆ ಉಷಾರಾಣಿ ಪರಿಚಯಿಸಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಬಿ.ಸಿ. ರಮೇಶ್, ‘ಅಧಿಕಾರಿಯನ್ನು ಕರೆದೊಯ್ದು ಪರಿಚಯಿಸಿದ್ದು ಸರಿಯಲ್ಲ’ ಎಂದು ಎಚ್ಚರಿಕೆ ನೀಡಿದ್ದರು. ಈ ವಿಚಾರವಾಗಿ ಮಾತನಾಡಲು ಉಷಾ ರಾಣಿ ಅವರನ್ನು ಮಂಗಳವಾರ ಸಂಜೆ ತಮ್ಮ ಕೊಠಡಿಗೆ ರಮೇಶ್ ಕರೆಸಿದ್ದರು. ಈ ವೇಳೆ ರಮೇಶ್ ಮತ್ತು ಉಷಾರಾಣಿ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಕೊಠಡಿಯಲ್ಲಿದ್ದ ರಮೇಶ್, ನರಸಿಂಹ, ಮುನಿರಾಜು, ಷಣ್ಮುಗಂ ಹಲ್ಲೆ ನಡೆಸಿದ್ದಾರೆ ಎಂದು ಉಷಾರಾಣಿ ಸಹೋದರ ನವೀನ್ ತಿಳಿಸಿದ್ದಾರೆ.
‘ಘಟನೆ ಬಗ್ಗೆ ಉಷಾರಾಣಿ ದೂರು ನೀಡಿದ್ದು, ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ದೂರಿನ ಪರಿಶೀಲನೆ ನಡೆಸಲಾಗುತ್ತಿದೆ. ಸ್ಥಳೀಯ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗುವುದು’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.