ಬೆಂಗಳೂರು: ಪ್ರೀತಿಗಾಗಿ ಕಿತ್ತಾಡಿಕೊಂಡ ಯುವಕರಿಬ್ಬರು ಯುವತಿ ಮೇಲೆ ಹಲ್ಲೆ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡಿರುವ ಈಕೆ ಖಾಸಗಿ ಆಸ್ಪತ್ರೆಯಲ್ಲಿ ಸಾವು– ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ಯುವತಿ ಕೊನೆಯ ಸೆಮಿಸ್ಟರ್ನಲ್ಲಿ ಓದುತ್ತಿದ್ದಾರೆ. 7ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಸ್ನೇಹಿತರ ಹುಟ್ಟುಹಬ್ಬ ಎಂದು ಹೇಳಿ ಮನೆಯಿಂದ ಹೊರ ಹೋಗಿದ್ದರು. 8 ಗಂಟೆ ಸುಮಾರಿಗೆ ಯುವತಿ ಸ್ನೇಹಿತ ಬಬಿತ್ ಎಂಬಾತನ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಬಬಿತನೇ ಫೋನ್ ಮಾಡಿ ಆಕೆಯ ಪೋಷಕರಿಗೆ ವಿಷಯ ತಿಳಿಸಿದ. ಆನಂತರ ಅವರು ಮಗಳನ್ನು ಕರೆದೊಯ್ದು ಆಸ್ಪತ್ರೆಗೆ ಸೇರಿಸಿದರು ಎನ್ನಲಾಗಿದೆ.
ಯುವತಿ ಹಾಗೂ ಬಬಿತ್ ನಾಲ್ಕು ವರ್ಷಗಳಿಂದ ಸಂಪರ್ಕದಲ್ಲಿದ್ದರು. ಬಳಿಕ ಈಕೆ ರಾಹುಲ್ ಎಂಬಾತನ ಜೊತೆ ಸ್ನೇಹ ಬೆಳೆಸಿ ಬಬಿತ್ನನ್ನು ಕಡೆಗಣಿಸಿದ್ದರು. ಕೆಲವು ತಿಂಗಳಿಂದ ಯುವತಿ ರಾಹುಲ್ ಜತೆ ತಿರುಗಾಡುವುದನ್ನು ಬಬಿತ್ ನೋಡಿದ್ದ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ. ಆರು ತಿಂಗಳ ಹಿಂದೆ ಈತ ಯುವತಿ ಮನೆಗೂ ಬಂದು ತನ್ನ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಗಲಾಟೆ ಮಾಡಿ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿ 7ರಂದು ರಾಹುಲ್ ಮನೆಯಲ್ಲಿದ್ದುದ್ದನ್ನು ಬಬಿತ್ ನೋಡಿದ. ಆ ಸಮಯದಲ್ಲಿ ಮೂವರಿಗೂ ಜಗಳವಾಯಿತು. ರಾಹುಲ್ ಯುವತಿಗೆ ಬಾಯಿಗೆ ಬಂದಂತೆ ಬೈದು ಎರಡು, ನೂರು ಸಲ ಹಲ್ಲೆ ಮಾಡಿದ. ಆನಂತರ ಯುವತಿ ಬಬಿತ್ ಜತೆ ಅವನ ಮನೆಗೆ ಹೋಗಿದ್ದರು. ಅಲ್ಲೂ ವಾಗ್ವಾದ ನಡೆದು, ಬಬಿತ್ ವಿದ್ಯಾರ್ಥಿನಿಗೆ ಹೆಲ್ಮೆಟ್ನಿಂದ ಹೊಡೆದ. ಇದಾದ ಬಳಿಕ ಅವರು ಕುಸಿದು ಬಿದ್ದರು ಎಂದೂ ಪೊಲೀಸರು ಹೇಳಿದ್ದಾರೆ.
ಯುವತಿ ಪರಿಸ್ಥಿತಿ ಗಂಭೀರವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸರು ಬಬಿತ್ ಮತ್ತು ರಾಹುಲ್ನನ್ನು ವಶಕ್ಕೆ ಪಡೆದಿದ್ದಾರೆ. ಯುವತಿ ತಾಯಿ ದೂರು ನೀಡಿದ್ದು ತನಿಖೆ ನಡೆಯುತ್ತಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.