ADVERTISEMENT

ಚಾಲಕನ ಮೇಲೆ ಹಲ್ಲೆ: ಠಾಣೆ ಎದುರು ಪೌರಕಾರ್ಮಿಕರ ಪ್ರತಿಭಟನೆ

ಕಸ ಸಾಗಣೆ ವಾಹನ ಚಾಲಕನ ಮೇಲೆ ಕಾನ್‌ಸ್ಟೇಬಲ್‌ ಹಲ್ಲೆ: ಆರೋಪ‍;

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 19:36 IST
Last Updated 19 ಡಿಸೆಂಬರ್ 2020, 19:36 IST

ಬೆಂಗಳೂರು: ‘ಬಿಬಿಎಂಪಿ ಕಸ ಸಾಗಣೆ ವಾಹನದ ಚಾಲಕನ ಮೇಲೆ ಸಂಚಾರ ಪೊಲೀಸರು ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿ ಕೆಲ ಪೌರ ಕಾರ್ಮಿಕರು, ಜೆ.ಜೆ.ನಗರ ಠಾಣೆ ಎದುರು ಶನಿವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು.

‘ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಸ್ವಚ್ಛತಾ ಕೆಲಸ ಮಾಡಲು ಪೌರ ಕಾರ್ಮಿಕರು ಹಾಜರಾಗಿದ್ದರು. ಕಸ ತುಂಬಿದ್ದ ವಾಹನವನ್ನು ಚಲಾಯಿಸಿಕೊಂಡು ಹೊರಟಿದ್ದ ಚಾಲಕರೊಬ್ಬರು, ರಸ್ತೆ ಬದಿಯಲ್ಲಿದ್ದ ಕಸ ತುಂಬಿಕೊಳ್ಳುವ ಸಲುವಾಗಿ ಸಂಚಾರ ಸಿಗ್ನಲ್‌ ಬಳಿ ವಾಹನ ನಿಲ್ಲಿಸಿದ್ದರು. ಸ್ಥಳಕ್ಕೆ ಬಂದು ಪ್ರಶ್ನಿಸಿದ್ದ ಪೊಲೀಸ್ ಕಾನ್‌ಸ್ಟೆಬಲೊಬ್ಬರು, ಚಾಲಕರ ಮೇಲೆಯೇ ಹಲ್ಲೆ ಮಾಡಿದ್ದಾರೆ’ ಎಂದು ಪ್ರತಿಭಟನಾನಿರತರು ದೂರಿದರು.

‘ರಸ್ತೆಯಲ್ಲಿದ್ದ ಕಸವನ್ನು ವಾಹನದಲ್ಲಿ ತುಂಬುತ್ತಿರುವಾಗಲೇ ಕಾನ್‌ಸ್ಟೆಬಲ್‌ ಹಲ್ಲೆ ಮಾಡಿದ್ದಾರೆ. ವಾಹನದಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದೂ ಅವರು ಒತ್ತಾಯಿಸಿದರು.

ADVERTISEMENT

ಮಾತಿನ ಚಕಮಕಿ: ‘ಜೆ.ಜೆ. ನಗರದ ಸಿಗ್ನಲ್‌ನಲ್ಲಿ ಕಾನ್‌ಸ್ಟೆಬಲ್ ಹಾಗೂ ಕಸ ಸಾಗಣೆ ವಾಹನ ಚಾಲಕನ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯಪ್ರವೇಶಿಸಿದ್ದ ಸ್ಥಳೀಯರೇ ಜಗಳ ಬಿಡಿಸಿದರು.

ನಂತರ, ಚಾಲಕ ಹಾಗೂ ಇತರೆ ಕಾರ್ಮಿಕರು ಠಾಣೆ ಬಳಿ ಹೋದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು

ಘಟನೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕಾನ್‌ಸ್ಟೆಬಲ್‌ ಹಾಗೂ ಅವರ ಠಾಣೆ ಅಧಿಕಾರಿ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.