ಬೆಂಗಳೂರು: ‘ಐಎಸ್ ಉಗ್ರರ ಸಂಘಟನೆಗೆ ಸೇರ್ಪಡೆಯಾಗಲು ಮುಗ್ಧ ಯುವಕರನ್ನು ಪ್ರಚೋದಿಸುತ್ತಿದ್ದರು’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಗರದ ಇಬ್ಬರು ಪ್ರಮುಖ ಆರೋಪಿಗಳ ವಿರುದ್ಧರಾಷ್ಟ್ರೀಯ ತನಿಖಾ ದಳವು (ಎನ್ಐಎ), ವಿಶೇಷ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪಣೆ ಪಟ್ಟಿ ಸಲ್ಲಿಸಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಬೆಂಗಳೂರಿನ ಮೊಹಮದ್ ತೌಕೀರ್ ಮೆಹಮೂದ್ ಮತ್ತು ಝೋಯೆಬ್ ಮುನ್ನಾ ವಿರುದ್ಧ ಈ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಕಳೆದ ತಿಂಗಳಲ್ಲಿ ಸಲ್ಲಿಸಲಾಗಿದೆ.
ಆರೋಪಿಗಳು, ‘ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದ್ದ ‘ಇಕ್ರಾ’ ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಿದ್ದ ಮುಗ್ಧ ಯುವಕರನ್ನುಐಎಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ) ಉಗ್ರ ಚಟುವಟಿಕೆಗಳಲ್ಲಿ ಸೇರ್ಪಡೆಯಾಗಲು ಪ್ರಚೋದಿಸುತ್ತಿದ್ದರು. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಬಿ) ವಿರೋಧಿಸಿ ಹೋರಾಟ ನಡೆಸುತ್ತಿದ್ದ ಯುವಕರನ್ನೂ ಸೆಳೆಯುತ್ತಿದ್ದರು’ ಎಂಬಅಂಶಆರೋಪ ಪಟ್ಟಿಯಲ್ಲಿ ವ್ಯಕ್ತವಾಗಿದೆ.
‘ಧರ್ಮದ ಹೆಸರಿನಲ್ಲಿ ನಡೆಸುತ್ತಿದ್ದ ಸಭೆಗಳಲ್ಲಿ ಭಾಗಿಯಾಗುತ್ತಿದ್ದ ಯುವಕ ರನ್ನು ಐಎಸ್ ಸೇರಲು ಪ್ರೇರೇಪಿಸಲಾಗುತ್ತಿತ್ತು. ಐಎಸ್ಗೆ ದೇಣಿಗೆ ಸಂಗ್ರಹ ಮಾಡುವ ಕೃತ್ಯ ಹಾಗೂ ಸಿರಿಯಾಕ್ಕೆ ಯುವಕರನ್ನು ಕಳುಹಿಸಲು ನೆರವು ನೀಡುತ್ತಿದ್ದರು’ ಎಂಬ ಅಂಶಗಳು ಆರೋಪಿಗಳ ವಿಚಾರಣೆ ವೇಳೆ ಅವರ ಇ–ಮೇಲ್ ಮತ್ತು ಸಾಮಾ ಜಿಕ ಜಾಲತಾಣಗಳ ದತ್ತಾಂಶಗಳನ್ನು ಪರಿಶೀಲನೆ ನಡೆಸಿದಾಗ ಕಂಡು ಬಂದಿದೆ’ ಎಂದೂ ಪಟ್ಟಿಯಲ್ಲಿ ವಿವರಿಸಲಾಗಿದೆ.
ಈ ಪ್ರಕರಣವನ್ನು ದೆಹಲಿ ಪೊಲೀಸರು ದಾಖಲಿಸಿದ್ದು ಇದರಲ್ಲಿ ನಗರದ ನಾಲ್ವರು ಆರೋಪಿಗಳಿದ್ದಾರೆ. ಇಬ್ಬರು ಸಂರಕ್ಷಿತ ಸಾಕ್ಷಿಗಳ ಆಧಾರದಲ್ಲಿ ಎನ್ಐಎ ತನಿಖೆ ಮುಂದುವರಿಸಿದೆ. ಎನ್ಐಎ ಪರ ಪಿ. ಪ್ರಸ್ನನಕುಮಾರ್ ಈ ಹೆಚ್ಚುವರಿ ದೋಷಾರೋಪಣೆ ಪಟ್ಟಿ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.