ಬೆಂಗಳೂರು: ‘ನಾಟಕ ಬೆಂಗ್ಳೂರು‘ 16ನೇ ರಂಗಸಂಭ್ರಮದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ನಾಟಕ ರಚನೆ ಸ್ಪರ್ಧೆಯಲ್ಲಿ ವಿದ್ಯಾರ್ಥಿ ನಾಟಕ ಸೇರಿದಂತೆ ಒಂಬತ್ತು ನಾಟಕಗಳ ಕೃತಿಗಳು ಬಹುಮಾನಕ್ಕೆ ಆಯ್ಕೆಯಾಗಿವೆ.
ರವೀಂದ್ರ ಕಲಾಕ್ಷೇತ್ರಕ್ಕೆ 60 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ನಡೆಯುತ್ತಿರುವ ‘ಕಲಾಕ್ಷೇತ್ರ 60’ ವಜ್ರಮಹೋತ್ಸವದ ನೆನಪನ್ನು ಹಸಿರಾಗಿಡಲು ಈ ನಾಟಕ ರಚನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗೆ ಒಟ್ಟು 40 ನಾಟಕಗಳ ಕೃತಿಗಳು ಬಂದಿದ್ದವು. ಅದರಲ್ಲಿ ಎರಡು ವಿದ್ಯಾರ್ಥಿ ನಾಟಕಗಳು.
ಬಹುಮಾನಕ್ಕೆ ಆಯ್ಕೆಯಾಗಿರುವ ನಾಟಕಗಳು ಹೀಗಿವೆ; 1) ಸುಮ್ಮನಿರು ಡಯೋಜಿನೆಸ್ – ಎನ್.ಸಿ.ಮಹೇಶ್ 2) ಚಿನಿವಾರನ ಮಗಳು – ಉಷಾ ನರಸಿಂಹನ್ 3)ಸನಿಮಾತ್ಮೆ – ಸಂತೋಷ್ ಗುಡ್ಡಿಯಂಗಡಿ 4)ಕಿಂಡ್ಸುಗಿ – ಚಂದನಾ ನಾಗ್, 5) ಯಾನ – ಕೃಷ್ಣ ಜನಮನ 6) ಎಮ್ಮಯ ಕೂಸ ಕಂಡಿರಾ– ಅನುಪಮಾ ಪ್ರಸಾದ್, 7) ಶೇಷಗ್ರಸ್ತರು – ರಮೇಶ್ ಚಂದ್ ಎಚ್.ಸಿ. 8) ಹದ್ದು ಮೀರಿತೆ ಹಾದಿ – ಭದ್ರಪ್ಪ ಶಿ. ಹೆನ್ಲಿ 9) ಯಾಜ್ಞಸೇನಿಯ ಆತ್ಮಕಥನ – ವಿಜಯಲಕ್ಷ್ಮಿ (ವಿದ್ಯಾರ್ಥಿ ವಿಭಾಗ).
ಬಹುಮಾನಕ್ಕೆ ಆಯ್ಕೆಯಾದ ಮೂರು ನಾಟಕಗಳಿಗೆ ತಲಾ ₹ 10 ಸಾವಿರ, ಉಳಿದ ಆರು ನಾಟಕಗಳಿಗೆ ತಲಾ ₹ 5 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ.
ಬೆಂಗಳೂರಿನ ಕಲಾಗಂಗೋತ್ರಿ ರಂಗತಂಡ ನಗದು ಬಹುಮಾನವನ್ನು ಪ್ರಾಯೋಜಿಸಿದೆ. ಬೆಂಗಳೂರಿನ ಭಾಗವತರು ಸಾಂಸ್ಕೃತಿಕ ಸಂಘಟನೆ ನಾಟಕಗಳನ್ನು ಪ್ರಕಟಿಸುತ್ತಿದೆ.
ಮಂಗಳವಾರ ಸಂಜೆ 6.30ಕ್ಕೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ‘ರವೀಂದ್ರ ಕಲಾಕ್ಷೇತ್ರ–60’ ವಜ್ರಮಹೋತ್ಸವ ಸಂಭ್ರಮ ಸಮಾರೋಪ ಸಮಾರಂಭ ಹಾಗೂ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ನಾಟಕ ರಚನಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುತ್ತಿದೆ ಎಂದು ನಾಟಕ ಬೆಂಗ್ಳೂರು, ಸಂಚಾಲನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.