ADVERTISEMENT

ಕಾರ್ಪೊರೇಟ್ ಆಸ್ಪತ್ರೆಯಲ್ಲಿದ್ದರೂ ಕೊಳೆಗೇರಿಗೆ ಹೋಗಿ:ಅಜೀಮ್ ಪ್ರೇಮ್ ಜಿ ಕಿವಿಮಾತು

ರಾಜೀವ ಗಾಂಧಿ ಆರೋಗ್ಯ ವಿವಿ ಘಟಿಕೋತ್ಸವದಲ್ಲಿ ಅಜೀಮ್ ಪ್ರೇಮ್ ಜಿ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 6 ಮೇ 2025, 14:01 IST
Last Updated 6 ಮೇ 2025, 14:01 IST
ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಚಿನ್ನದ ಪದಕ ವಿಜೇತ ಅಭ್ಯರ್ಥಿಗಳು
– ಪ್ರಜಾವಾಣಿ ಚಿತ್ರ
–
ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಚಿನ್ನದ ಪದಕ ವಿಜೇತ ಅಭ್ಯರ್ಥಿಗಳು – ಪ್ರಜಾವಾಣಿ ಚಿತ್ರ –   

ಬೆಂಗಳೂರು: ‘ಆರೋಗ್ಯವಂತ ಜನರಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ. ಆದ್ದರಿಂದ ಮಹಾನಗರ ಅಥವಾ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದರೂ ಬಿಡುವಿನ ಸಮಯದಲ್ಲಿ ಕೊಳೆಗೇರಿಗಳಿಗೆ ತೆರಳಿ, ವೈದ್ಯಕೀಯ ಸೇವೆ ಒದಗಿಸಿ’ ಎಂದು ವಿಪ್ರೊ ಕಂಪನಿ ಸಂಸ್ಥಾಪನಾಧ್ಯಕ್ಷ ಅಜೀಂ ‍ಪ್ರೇಮ್‌ ಜಿ ಅವರು ಯುವ ವೈದ್ಯರಿಗೆ ಕಿವಿಮಾತು ಹೇಳಿದರು. 

ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 27ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು, ಘಟಿಕೋತ್ಸವ ಭಾಷಣ ಮಾಡಿದರು. 

‘ಆರೋಗ್ಯ ಮತ್ತು ಶಿಕ್ಷಣ ಉತ್ತಮ ಸಮಾಜ ಹಾಗೂ ದೇಶದ ಅಡಿಪಾಯಗಳಾಗಿವೆ. ಈ ಕ್ಷೇತ್ರಗಳಲ್ಲಿ ಸೇವೆಯೇ ಪ್ರಧಾನ. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಆರೋಗ್ಯ ಮತ್ತು ಶಿಕ್ಷಣವನ್ನು ಪಡೆಯುವಂತಾಗಬೇಕು. ರೋಗಿಯೊಬ್ಬರು ಆಸ್ಪತ್ರೆಗೆ ಬಂದಾಗ ವೈದ್ಯರ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿರುತ್ತಾರೆ. ಈ ಸಂದರ್ಭದಲ್ಲಿ ವೈದ್ಯರಾದವರು ಅವರ ನಂಬಿಕೆ ಉಳಿಸಿಕೊಳ್ಳುವುದು ಮುಖ್ಯವಾಗುತ್ತದೆ. ವೈದ್ಯಕೀಯ ವೃತ್ತಿಯನ್ನು ವ್ಯಾವಹಾರಿಕವಾಗಿ ನೋಡದೆ, ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಆ ನಂಬಿಕೆ ಉಳಿಸಿಕೊಳ್ಳಲು, ಉತ್ತಮ ವೈದ್ಯರಾಗಲು ಸಾಧ್ಯ’ ಎಂದು ಹೇಳಿದರು. 

ADVERTISEMENT

‘ನಮ್ಮ ದೇಶವನ್ನು ಆರೋಗ್ಯಕರ ಮತ್ತು ಚೈತನ್ಯಶೀಲವಾಗಿರಿಸುವಲ್ಲಿ ವೈದ್ಯರು ಮಹತ್ವದ ಪಾತ್ರ ವಹಿಸುತ್ತಾರೆ. ದುರ್ಬಲ ಜನರಿರುವ ಪ್ರದೇಶ, ಗ್ರಾಮೀಣ ಭಾಗಗಳಲ್ಲಿ ವೈದ್ಯರ ಸೇವೆ ಅತ್ಯಗತ್ಯ. ಇಡೀ ವೃತ್ತಿ ಜೀವನವನ್ನು ಅಂತಹ ಸೇವೆಗೆ ಮೀಸಲಿಡಲು ಸಾಧ್ಯವಾಗದಿದ್ದರೆ, ನಿಮ್ಮ ಸಮಯದ ಒಂದು ಭಾಗವನ್ನಾದರೂ ಆ ಪ್ರದೇಶಗಳ ಜನರಿಗೆ ಮೀಸಲಿಡುವ ಮಾರ್ಗಗಳನ್ನು ಕಂಡುಕೊಳ್ಳಬೇಕು. ಸಮಾಜವು ವಿವಿಧ ರೂಪದಲ್ಲಿ ನಮ್ಮ ಮೇಲೆ ಹೂಡಿಕೆ ಮಾಡುತ್ತಿದ್ದು, ಅದನ್ನು ಹಿಂತಿರುಗಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು. 

ವೇಗವಾಗಿ ಬೆಳವಣಿಗೆ: ಚಿನ್ನದ ಪದಕಗಳನ್ನು ಪ್ರದಾನ ಮಾಡಿದ ರಾಜ್ಯಪಾಲ ಥಾವರಚಂದ್‌ ಗೆಹಲೋತ್, ‘ನಮ್ಮ ದೇಶದಲ್ಲಿ ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ವೈದ್ಯರಾದವರು ನೈತಿಕ ಮೌಲ್ಯಗಳ ಜತೆಗೆ ಸೇವೆಯಲ್ಲಿ ಅರ್ಪಣಾ ಮನೋಭಾವ, ವೃತ್ತಿಗೌರವ ಬೆಳೆಸಿಕೊಳ್ಳಬೇಕು. ವೈದ್ಯಕೀಯ ಕ್ಷೇತ್ರವು ವೇಗವಾಗಿ ಬೆಳವಣಿಗೆ ಹೊಂದುವ ಜತೆಗೆ ಹಲವು ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದೆ. ಕೃತಕ ಬುದ್ಧಿಮತ್ತೆ, ಟೆಲಿ ಮೆಡಿಸಿನ್, ರೊಬೊಟಿಕ್ ತಂತ್ರಜ್ಞಾನದಿಂದ ಹಲವು ಆವಿಷ್ಕಾರಗಳನ್ನು ಕಾಣಬಹುದಾಗಿದೆ. ಆದ್ದರಿಂದ ವೈದ್ಯರಾದವರಿಗೆ ನಿರಂತರ ಕಲಿಕೆ ಮುಖ್ಯವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಯುವ ವೈದ್ಯರು ಆಸಕ್ತಿ ತೋರಬೇಕಿದೆ. ಅಲ್ಲಿ ಕಾರ್ಯನಿರ್ವಹಿಸುವ ವೈದ್ಯರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಸಿಗಲಿದೆ’ ಎಂದು ಹೇಳಿದರು. 

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ, ‘ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಪದವಿ ಪಡೆಯುವ ಪ್ರತಿಯೊಬ್ಬರಿಗೂ ಸೇವೆಯೇ ಮುಖ್ಯ ಧ್ಯೇಯವಾಗಿರಬೇಕು. ರೋಗಿಗಳನ್ನು ಅತ್ಯಂತ ಶ್ರದ್ಧೆ ಹಾಗೂ ಹೆಚ್ಚು ಕಾಳಜಿ ವಹಿಸಿ ಆರೈಕೆ ಮಾಡಬೇಕು. ನಿಮ್ಮ ಸೇವೆಯಿಂದ ಸ್ವಸ್ಥ ಸಮಾಜ ನಿರ್ಮಾಣವಾಗಬೇಕು’ ಎಂದರು.  

ವಿಶ್ವವಿದ್ಯಾಲಯದ ಕುಲಪತಿ ಭಗವಾನ್‌ ಬಿ.ಸಿ., ಕುಲಸಚಿವ ಶಿವಪ್ರಸಾದ್ ಪಿ.ಆರ್. ಉಪಸ್ಥಿತರಿದ್ದರು. 

ಅಧಿಕ ಚಿನ್ನದ ಪದಕ ‍ಪಡೆದ ಡಾ. ಗಿರೀಶ್ ಬಿ.ಎಸ್. ಡಾ. ಗನ್ಯಾಶ್ರೀ ಡಾ. ಪ್ರಕೃತಿ ಸಿ. ಪಾಟೀಲ ಹಾಗೂ ಅಲೀನಾ ಜೋಸ್ ಅವರು ಚಿನ್ನದ ಪದಕ ಮತ್ತು ಪ್ರಮಾಣ ಪತ್ರ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ
ಸದ್ಯ ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಮುಂದೆ ಪಿಎಚ್‌.ಡಿ ಮಾಡಬೇಕು ಅಂದುಕೊಂಡಿದ್ದೇನೆ
ಡಾ.ಬಿ.ಎಸ್. ಗಿರೀಶ್ 6 ಚಿನ್ನದ ಪದಕ ವಿಜೇತ
ಪರೀಕ್ಷೆ ಸಮಯದಲ್ಲಿ ಹೆಚ್ಚಿನ ಅವಧಿ ಓದಿದ್ದರಿಂದ ಅಧಿಕ ಅಂಕ ಗಳಿಸಲು ಸಾಧ್ಯವಾಯಿತು. ಮುಂದೆ ಎಂ.ಡಿ. ಮಾಡಬೇಕು ಅಂದುಕೊಂಡಿದ್ದೇನೆ
ಡಾ. ಗನ್ಯಾಶ್ರೀ 4 ಚಿನ್ನದ ಪದಕ ವಿಜೇತೆ

93 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ

ಘಟಿಕೋತ್ಸವ ಸಮಾರಂಭದಲ್ಲಿ ವಿಜ್ಞಾನಿ ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್ ಕೇಂದ್ರದ ಮುಖ್ಯಸ್ಥ ಹೊಂಬೇಗೌಡ ಶರತ್‌ಚಂದ್ರ ಒಎಂಎಫ್ ಸರ್ಜನ್ ಡಾ. ಗಿರೀಶ್ ರಾವ್ ಮತ್ತು ನರರೋಗ ತಜ್ಞ ಡಾ.ಜಿ.ಟಿ. ಸುಭಾಷ್ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಗೌರವ ಪ್ರದಾನ ಮಾಡಲಾಯಿತು. ಒಟ್ಟು 93 ವಿದ್ಯಾರ್ಥಿಗಳಿಗೆ 109 ಚಿನ್ನದ ಪದಕ ವಿತರಿಸಲಾಯಿತು. ಪಿಇಎಸ್ ಫಾರ್ಮಸಿ ಕಾಲೇಜಿನ ಫಾರ್ಮಾ ಡಿ. ಕೋರ್ಸ್‌ನ ಡಾ. ಗಿರೀಶ್ ಬಿ.ಎಸ್. (6) ಉಜಿರೆಯ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಡಾ. ಗನ್ಯಾಶ್ರೀ (4) ಶಿವಮೊಗ್ಗ ಶರಾವತಿ ದಂತ ಕಾಲೇಜಿನ ಡಾ. ಪ್ರಕೃತಿ ಸಿ. ಪಾಟೀಲ (3) ಹಾಗೂ ನೈಟಿಂಗೇಲ್ ನರ್ಸಿಂಗ್ ಕಾಲೇಜಿನ ಅಲೀನಾ ಜೋಸ್ (3) ಅಧಿಕ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.